ಬೆಂಗಳೂರು: ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ಲೋನ್ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಹೆಸರು ಕೇಳಿಬಂದಿತ್ತು. ಇದೀಗ ಪ್ರಕರಣ ಸುಖಾಂತ್ಯ ಕಂಡಿದ್ದು, ಇಂದು ಉಮಾಪತಿ ಅವರು ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ.
ಬನಶಂಕರಿಯಲ್ಲಿರೋ ಬನಶಂಕರಿ ದೇವಾಲಯಕ್ಕೆ ಬಂದಿರುವ ಉಮಾಪತಿ ದಂಪತಿ ಶಾಕಾಂಬರಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣದ ಸಂಬಂಧ ತಪ್ಪು-ಒಪ್ಪುಗಳನ್ನ ತಾಯಿ ಬನಶಂಕರಿ ನೋಡಿಕೊಳ್ಳುತ್ತಾಳೆ ಎಂದು ಉಮಾಪತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಅಂತ್ಯ ಹಾಡಿದ ಬಳಿಕ ಇಂದು ದಂಪತಿ ಬನಶಂಕರಿ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾದ ದರ್ಶನ್, ಉಮಾಪತಿ
ಇತ್ತ ಪ್ರಕರಣ ಸಂಬಂಧ ದರ್ಶನ್ ಹಾಗೂ ಉಮಾಪತಿ ಜಂಟಿಯಾಗಿ ನಗರ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ. ಎರಡು ಮೂರು ದಿನದಲ್ಲಿ ಪ್ರಕರಣ ಸಂಬಂಧ ಭೇಟಿ ಮಾಡಲು ನಿರ್ಧರಿಸಿದ್ದಾರೆ. ಅರುಣಾ ಕುಮಾರಿ ಏನೇ ರಿಯಾಕ್ಷನ್ ಕೊಟ್ರು ನಾನ್ ಆಗಲಿ ದರ್ಶನ್ ಸಾರ್ ಆಗಲಿ ಮಾತನಾಡಲ್ಲ. ದರ್ಶನ್ ಸಾರ್ ನಿನ್ನೆ ಪ್ರಕರಣಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ನಾನು ರಿಯಾಕ್ಷನ್ ಕೊಡಲ್ಲ. ದಾಖಲೆಗಳು ಕೈಗೆ ಸಿಗುತ್ತಿದ್ದಂತೆ ಜಂಟಿ ಸುದ್ದಿಗೋಷ್ಠಿ ಮಾಡಿ ತಿಳಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅವತ್ತು ನಂದಿನಿ, ಇವತ್ತು ಅರುಣಾ ಕುಮಾರಿ – ಮಹಿಳೆಯೇ ಮೋಸಗಾತಿ ಅಂದ್ರು ನಾಗವರ್ಧನ್
ತಮ್ಮ ಹೆಸರಿನಲ್ಲಿ ವಂಚನೆಗೆ ಮುಂದಾಗಿದ್ದ ಮಹಿಳೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಎಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. 15 ದಿನಗಳ ಹಿಂದೆ ದರ್ಶನ್ ಬಳಿ ಓರ್ವ ಮಹಿಳೆ ಬಂದು, ನಿಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿಕೊಂಡು 25 ಕೋಟಿ ರೂ. ಸಾಲ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ದರ್ಶನ್ ಆಪ್ತ ರಾಬರ್ಟ್ ನಿರ್ಮಾಪಕ ಉಮಾಪತಿ, ಮಹಿಳೆಯನ್ನ ದರ್ಶನ್ ಬಳಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇನ್ನೂ ತಮ್ಮ ಹೆಸರಿನಲ್ಲಿ ಶ್ಯೂರಿಟಿ ಹಾಕಿದ್ದಾರೆ ಎನ್ನಲಾದ ಎಲ್ಲ ಗೆಳೆಯರನ್ನು ದರ್ಶನ್ ವಿಚಾರಿಸಿದಾಗ ಮಹಿಳೆಯೇ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುವುದು ತಿಳಿದು ಬಂದಿತ್ತು. ಈ ಕುರಿತಾಗಿ ದರ್ಶನ್ ದೂರು ದಾಖಲಿಸಿದ್ದರು.