ಹಾಸನ: ಹತ್ತು ಆನೆ ಬೇಕಾದರೂ ಸಾಕ್ತೀನಿ, ನಮ್ಮಪ್ಪ ಮದ್ವೆ ಆಗು ಅಂತಿದ್ದಾರೆ ಏನು ಮಾಡೋಣ ಎಂದು ತುಂಬಿದ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ತಮಾಷೆ ಮಾಡಿದ ಪ್ರಸಂಗ ನಡೆದಿದೆ.
ನಗರದ ಸಕಲೇಶಪುರದ ಪುರಭವನದಲ್ಲಿ ಆನೆ ಸಮಸ್ಯೆ ಬಗ್ಗೆ ಸಭೆ ನಡೆಯುತ್ತಿತ್ತು. ಈ ವೇಳೆ ಮಾಜಿ ಶಾಸಕ ವಿಶ್ವನಾಥ್ ಅವರು, ಹೊಳೆನರಸೀಪುರ ಕ್ಷೇತ್ರಕ್ಕೆ ಹತ್ತು ಆನೆ ಬಿಟ್ರೆ ಸಮಸ್ಯೆ ಬಗೆಹರಿಯುತ್ತೆ ಎಂದು ತಮಾಷೆ ಮಾಡಿದರು. ಈ ವೇಳೆ ಅವರ ಮಾತಿಗೆ ಪ್ರತ್ಯುತ್ತರ ನೀಡಿದ ಸಂಸದ ಪ್ರಜ್ವಲ್ ರೇವಣ್ಣ, ಹತ್ತು ಆನೆ ಬೇಕಾದರೂ ಸಾಕುತ್ತೇನೆ. ಆದರೆ ಏನ್ ಮಾಡೋದು ನಮ್ಮಪ್ಪ ಮದುವೆ ಆಗು ಅಂತಿದ್ದಾರೆ ಎಂದು ತಮಾಷೆ ಮಾಡಿದರು. ಇದರಿಂದ ಒಂದು ಕ್ಷಣ ಎಲ್ಲರೂ ನಗೆಗಡಲಲ್ಲಿ ತೇಲಿದರು.
ಇದೇ ವೇಳೆ ಶಾಸಕ ಪ್ರೀತಂಗೌಡ ಅವರನ್ನು ಮೂರ್ಖ ಎಂದು ತುಂಬಿದ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪರೋಕ್ಷವಾಗಿ ಜರಿದಿದ್ದಾರೆ. ಯಾರೋ ಮೂರ್ಖರು ಪ್ರಜ್ವಲ್ ರೇವಣ್ಣ ಸರಿಯಾಗಿ ಮಾತಾಡಿಲ್ಲ ಅದಕ್ಕೆ ಅನುದಾನ ಬಂದಿಲ್ಲ ಅಂತಾರೆ. ಎಂಪಿಯಾಗಿ ನಾವು ರಿಕ್ವೆಸ್ಟ್ ಮಾಡಿ ಧ್ವನಿ ಎತ್ತಬಹುದು. ಸಮಸ್ಯೆ ಬಗ್ಗೆ ಬಿಂಬಿಸಬಹುದು. ಆದರೆ ರಾಜ್ಯ ಸರ್ಕಾರ ಪ್ರಪೋಸಲ್ ಕಳುಹಿಸದೆ ಕೆಲಸ ಆಗಲ್ಲ. ಇದನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಸಭೆಯಲ್ಲಿ ಸಚಿವರಾದ ಅರವಿಂದ ಲಿಂಬಾವಳಿ, ಗೋಪಾಲಯ್ಯ ಸೇರಿದಂತೆ ಶಾಸಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.