ಚೆನ್ನೈ: ಖ್ಯಾತ ಧಾರಾವಾಹಿ ನಟಿ ವಿ.ಜೆ ಚಿತ್ರಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಕೆಯ ಪತಿ ಹೇಮನಾಥ್ ನನ್ನು ಚೆನ್ನೈನ ನಜರತ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ವಾರ ಚೆನ್ನೈನ ಹೋಟೆಲೊಂದರಲ್ಲಿ ವಿ.ಜೆ ಚಿತ್ರಾ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಕೈಗೆತ್ತಿಕೊಂಡು ಪೊಲೀಸರು, ಚಿತ್ರಾ ಸಾವಿಗೆ ಮಾನಸಿಕ ಒತ್ತಡವೇ ಕಾರಣವಾಯಿತೇ…? ತನ್ನ ತಾಯಿ ಹಾಗೂ ಮದುವೆಯಾಗಬೇಕಿದ್ದ ಹುಡುಗನಿಂದಾಗಿಯೇ ಚಿತ್ರಾ ಸಾವನ್ನಪ್ಪಿದರಾ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತನಿಖೆ ಆರಂಭಿಸಿದ್ದರು. ಈ ವೇಳೆ ಮಹತ್ವದ ಅಂಶಗಳು ಬಯಲಾಗಿದೆ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಚಿತ್ರಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹೇಮನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದು ಸುಮಾರು 6 ದಿನಗಳ ಕಾಲ ತನಿಖೆ ನಡೆಸಿದ ಬಳಿಕ ಪೊಲೀಸರು ಇಂದು ಹೇಮನಾಥ್ ನನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಅಲ್ಲದೆ ಹೇಮನಾಥ್ ವಿರುದ್ಧ ಐಪಿಸಿ ಸೆಕ್ಷನ್ 306 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಾಯಿ ವಿಜಯ ಹಾಗೂ ಪ್ರಿಯಕರ ಹೇಮನಾಥ್ ಅವರಿಂದ ಚಿತ್ರಾ ಅವರ ಮೇಲೆ ತೀವ್ರ ಒತ್ತಡವಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಇವರಿಬ್ಬರ ಒತ್ತಡದಿಂದಾಗಿ ಚಿತ್ರಾ ಮಾನಸಿಕವಾಗಿ ತುಂಬಾ ನೊಂದಿದ್ದರು. ಅಲ್ಲದೇ ಸೀರಿಯಲ್ ಶೂಟಿಂಗ್ ಲೊಕೇಷನ್ಗೆ ಹೇಮನಾಥ್ ಮದ್ಯಸೇವಿಸಿ ಬಂದು ಚಿತ್ರಾ ಜೊತೆ ಗಲಾಟೆ ಮಾಡಿದ್ದ ಎಂಬ ಅಂಶವೂ ತನಿಖೆ ವೇಳೆ ಬಯಲಿಗೆ ಬಂದಿತ್ತು.
ಈ ವಿಚಾರ ಗೊತ್ತಾದ ಮೇಲೆ ತಾಯಿ ವಿಜಯಾ ಅವರು ಹೇಮನಾಥ್ನನ್ನು ಮದುವೆಯಾಗಬೇಡ, ಬದಲಿಗೆ ಬೇರೆ ಯಾರನ್ನು ಬೇಕಾದರೂ ಮದುವೆಯಾಗು ಎಂದು ಹಠ ಹಿಡಿದಿದ್ದರು. ಆದರೆ ವಿವಾಹ ನಿಶ್ಚಿತಾರ್ಥ ನಡೆದ ಬಳಿಕ ಫೆಬ್ರವರಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿದ್ದರೂ ಮನೆಯವರಿಗೆ ಹೇಳದೇ ಇಬ್ಬರೂ ರಿಜಿಸ್ಟರ್ ಮದುವೆ ಆಗಿದ್ದರು. ಒಂದು ಕಡೆ ಅಮ್ಮನ ಒತ್ತಡ, ಇನ್ನೊಂದು ಕಡೆ ಭಾವಿ ಪತಿಯ ಗಲಾಟೆಯಿಂದಾಗಿ ಚಿತ್ರಾ ತುಂಬಾ ನೊಂದಿದ್ದರು ಎಂದು ಪೊಲೀಸರು ಹೇಳಿದ್ದರು.