ಬೆಂಗಳೂರು: ಡಿಜೆ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದು, ದಿನಕ್ಕೊಂದು ಜಾಗ ಬದಲಿಸುತ್ತಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇದರಿಂದಾಗಿ ಈ ವರೆಗೆ ಪೊಲೀಸರಿಗೆ ಸಂಪತ್ ರಾಜ್ ಸುಳಿವು ಸಿಕ್ಕಿಲ್ಲ.
ದಿನಕ್ಕೊಂದು ಜಾಗ ಬದಲಿಸುತ್ತಿರುವ ಮಾಜಿ ಮೇಯರ್ ಸಂಪತ್ ರಾಜ್, ಇಪ್ಪತ್ತು ದಿನ ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲ. ಸಿಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ಎರಡು ವಿಶೇಷ ತಂಡ ರಚಿಸಲಾಗಿದ್ದು, ತಂಡ ಹುಡುಕಾಟವನ್ನು ಮುಂದುವರಿಸಿದೆ. ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದು, ನಾಗರಹೊಳೆ ಭಾಗದ ರೆಸಾರ್ಟ್ ಗಳಲ್ಲೂ ಸರ್ಚ್ ಆಪರೇಷನ್ ನಡೆಸಿದ್ದಾರೆ. ಆದರೆ ಇದುವರೆಗೆ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: ಸಂಪತ್ ರಾಜ್ ಕುಟುಂಬ ಸದಸ್ಯರ ಫೋನ್ ಸ್ವಿಚ್ ಆಫ್ – ಪತ್ತೆಗೆ ವಿಶೇಷ ತಂಡ ರಚನೆ
ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಯಾಗುತ್ತಿಲ್ಲ. ಇದರ ಜೊತೆಗೆ ಮಾಜಿ ಕಾರ್ಪೋರೇಟರ್ ಝಾಕೀರ್ ಸಹ ನಾಪತ್ತೆಯಾಗಿದ್ದಾರೆ. ಝಾಕೀರ್ಗಾಗಿ ಸಹ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇಬ್ಬರ ಬಗ್ಗೆ ಸಹ ಮಾಹಿತಿ ಸಿಗುತ್ತಿಲ್ಲ. ರಾಜ್ಯದ ಗಡಿ ಭಾಗದಲ್ಲೂ ಸಿಸಿಬಿ ಅಧಿಕಾರಿಗಳು ಹುಡುಕಿದ್ದು, ಮೊಬೈಲ್ ಬಳಸದೆ ಯಾರ ಸಂಪರ್ಕವನ್ನೂ ಮಾಡದೆ ಟೆಕ್ನಿಕಲ್ ಪ್ಲಾನ್ ಉಪಯೋಗಿಸಿ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದಾರೆ.