ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದ ದಿವ್ಯಾ ಉರುಡುಗ ಟಾಸ್ಕ್ ವೇಳೆ ತೆಗೆದುಕೊಂಡಿದ್ದ ಕೆಲವು ತಪ್ಪು ನಿರ್ಧಾರಗಳ ಕುರಿತಂತೆ ಕಿಚ್ಚ ಸುದೀಪ್, ದಿವ್ಯಾ ಉರುಡುಗಗೆ ತಿಳಿ ಹೇಳಿದ್ದಾರೆ.
ಬಿಗ್ಬಾಸ್ ಪ್ರಕಾರ ಮನೆಯ ಕ್ಯಾಪ್ಟನ್ ಆಗಿ ದಿವ್ಯಾ ಉರುಡುಗರವರು ತೆಗೆದುಕೊಂಡ ನಿರ್ಧಾರಗಳು ಬಹಳ ಚೆನ್ನಾಗಿತ್ತು, ನೀವು ಯಾರಿಗೂ ಭೇದ-ಭಾವ ಮಾಡಲಿಲ್ಲ, ಯಾರ ಪರವಾಗಿಯೂ ಇರಲಿಲ್ಲ ಎಂಬುದು ಬಿಗ್ಬಾಸ್ ಅನಿಸಿಕೆ ಗುಡ್ ಜಾಬ್ ಎಂದು ಮೊದಲು ಶ್ಲಾಘಿಸುತ್ತಾರೆ. ನಂತರ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅರವಿಂದ್ ಲಾಕರ್ ಬೀಗ ತೆಗೆದು ಅದನ್ನು ಲಾಕರ್ ಮೇಲೆಯೇ ಇಟ್ಟಿದ್ದರು. ಇದನ್ನು ಪ್ರಶಾಂತ್ರವರು ನಿಮಗೆ ತಿಳಿಸಿದಾಗ ನೀವು ಅದನ್ನು ಸರಿಪಡಿಸಿದ್ರಿ, ಆದರೆ ಇದೇ ತಪ್ಪನ್ನು ಮನೆಯ ಬೇರೆ ಸ್ಪರ್ಧಿಗಳು ಮಾಡಿದ್ದರೆ, ನಿಮ್ಮ ಪ್ರತಿಕ್ರಿಯೆ ಇಷ್ಟೇ ಸಿಂಪಲ್ ಇರುತ್ತಿತ್ತಾ? ನೀವು ವಾರ್ನಿಂಗ್ ಮಾಡುವ ಶೈಲಿ ಆಗ ಮಾತ್ರ ನಮಗೆ ಕಾಣಿಸಲಿಲ್ಲ. ಅದರಿಂದ ಇನ್ನೊಬ್ಬರು ಕ್ಯಾಪ್ಟನ್ ಆಗುವ ಅವಕಾಶ ತಪ್ಪಿತು ಎಂಬುದು ನಿಮಗೆ ಅರ್ಥವಾಗಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಮೊಟ್ಟೆ ಒಡೆಯುವ ಟಾಸ್ಕ್ ವೇಳೆ ಕ್ಯಾಪ್ಟನ್ ಆದವರು ರೂಲ್ಸ್ ಬುಕ್ ಓದಿದ ನಂತರ ಟಾಸ್ಕ್ ಆರಂಭಿಸಬೇಕು. ಆದರೆ ನೀವು ಅದನ್ನು ಮಾಡಲಿಲ್ಲ. ರಾತ್ರಿ ಒಂದು ರೂಲ್ಸ್ ಬೆಳಗ್ಗೆ ಒಂದು ರೂಲ್ಸ್ ಬದಲಾಯಿಸುವುದು ಎಷ್ಟು ಸರಿ. ರೂಲ್ಸ್ ಚೇಂಜ್ ಮಾಡುವುದು ತಪ್ಪಲ್ಲ. ಚೇಂಜ್ ಮಾಡಿದ ನಂತರ ಮನೆಯ ಎಲ್ಲ ಸ್ಪರ್ಧಿಗಳಿಗೂ ತಿಳಿಸುವುದು ಒಂದು ನಾಯಕಿಯ ಕರ್ತವ್ಯ ಎಂದು ತಿಳಿ ಹೇಳಿದ್ದಾರೆ.
ಮಂಜು ಹಾಗೂ ಪ್ರಶಾಂತ್ ನಡುವೆ ನಡೆದ ಏಪ್ರನ್ ಕಿತ್ತಾಟ ವಿಚಾರವಾಗಿ ಮಾತನಾಡಿ, ಮಂಜು, ಪ್ರಶಾಂತ್, ದಿವ್ಯಾ ಉರುಡುಗ ನಿಮ್ಮ ಮೂವರ ವಾದ ಸರಿ ಕೂಡ ಇತ್ತು, ಜೊತೆಗೆ ಅಷ್ಟೇ ತಪ್ಪು ಕೂಡ ಇತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ಆ ವೇಳೆ ದಿವ್ಯಾ ಉರುಡುಗರವರ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಆದರೆ ಒಂದು ಬಾರಿ ಏಪ್ರನ್ನನ್ನು ನೀವು ಹಿಂಪಡೆದು ಇಬ್ಬರನ್ನು ಮೈನ್ ಡೋರ್ನಿಂದ ಮತ್ತೆ ಓಡಿಸಬಹುದಿತ್ತು ಎಂದಿದ್ದಾರೆ.
ದಿವ್ಯಾ ಉರುಡುಗ ನಿಮ್ಮ ಕ್ಯಾಪ್ಟನ್ ಶಿಪ್ ಜರ್ನಿ ಬಹಳ ಚೆನ್ನಾಗಿ ಪ್ರಾರಂಭವಾಯಿತು. ನನ್ನ ಹಾಗೂ ಜನಗಳ ಅನಿಸಿಕೆ ಪ್ರಕಾರ ನಿಮ್ಮ ತೀರ್ಮಾನಗಳು ಬಹಳ ಚೆನ್ನಾಗಿತ್ತು. ಆದರೆ ಇಷ್ಟು ತಪ್ಪುಗಳು ನಡೆದಿದೆ. ಇದೆಲ್ಲವೂ ನಿಮ್ಮ ಗಮನದಲ್ಲಿರಲಿ. ನೀವು ಚೆನ್ನಾಗಿ ಆಡಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಿಮ್ಮ ನಿರ್ಧಾರಗಳು ತಪ್ಪಾಗಿದೆ ಎಂದು ಕೂಡ ಹೇಳುತ್ತಿಲ್ಲ. ಚೆನ್ನಾಗಿ ಕ್ಯಾಪ್ಟನ್ಸಿ ನಿಭಾಯಿಸುವ ಪ್ರಯತ್ನದಲ್ಲಿ ಕೆಲವು ಸ್ಪರ್ಧಿಗಳು ಹೇಳುವ ಮಾತನ ಕಡೆ ಗಮನ ನೀಡಬೇಕಾಗಿತ್ತು. ಇದರಿಂದ ನಿಮಗೆ ಸ್ಪಷ್ಟತೆ ಸಿಗುತ್ತಿತ್ತು. ಅಷ್ಟೇ. ತಪ್ಪಾಗಿದೆ ಎಂಬುದು ನಿಮಗೆ ಕೂಡ ಗೊತ್ತಾಗಲಿಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಮಾತನಾಡುತ್ತಿದ್ದೇನೆ ಹೊರತು ನಿಮ್ಮ ತಪ್ಪನ್ನು ಎತ್ತಿ ತೋರಿಸುವ ಉದ್ದೇಶ ನಮಗೆ ಇಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ದಿವ್ಯಾ ಉರುಡುಗರವರು ನಾನು ನನಗೆ ಬೇಕಾದಂತೆ ರೂಲ್ಸ್ ಮಾಡಿಕೊಂಡೆ ಎಂದು ಪ್ರಶಾಂತ್ರವರು ಆರೋಪಿಸಿದ್ದಾರೆ. ಆದರೆ ನಾನು ಎಲ್ಲರಿಗೂ ಒಳ್ಳೆಯದಾಗಬೇಕೆಂದು ನಿರ್ಧಾರಗಳನ್ನು ತೆಗೆದುಕೊಂಡೆ. ಒಂದು ವೇಳೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾನೆ ಎಂದು ಗಳಗಳನೇ ಅತ್ತಿದ್ದಾರೆ. ಇದನ್ನೂ ಓದಿ:ಮಾತುಗಳಿಗೂ ಸ್ಯಾನಿಟೈಸರ್ ಬಳಸಿ – ಪ್ರಶಾಂತ್, ಚಕ್ರವರ್ತಿಗೆ ಕಿಚ್ಚ ವಾರ್ನ್