– ಯೋಧರ ಸಮವಸ್ತ್ರದ ಕನಸು ನನಸಾಗಲಿಲ್ಲ
– ಡೆತ್ನೋಟ್ ನಲ್ಲಿ ಹುಡುಗಿ ಹೇಳಿದ್ದೇನು..?
ಮುಂಬೈ: ಮೂವರ ಕಿರುಕುಳದಿಂದ ಬೇಸತ್ತು 17 ವರ್ಷದ ಸೇನಾ ಆಕಾಂಕಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪಂಧರ್ ಪುರ ನಗರದಲ್ಲಿ ನಡೆದಿದೆ.
ಮೃತ ಹುಡುಗಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಬೇಕು ಎಂಬ ಹಂಬಲವಿತ್ತು. ಆದರೆ ಮೂವರು ವ್ಯಕ್ತಿಗಳ ನಿರಂತರ ಕಿರುಕುಳದಿಂದ ನೊಂದಿರುವ ಈಕೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹದಿಹರೆಯದ ಹುಡುಗಿ ಡಿಸೆಂಬರ್ 7ರಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹುಡುಗಿ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತ್ರಿವರ್ಣ ಬ್ಯಾಡ್ಜ್ ನೊಂದಿಗೆ ಯೋಧರ ಸಮವಸ್ತ್ರ ಧರಿಸಿಕೊಳ್ಳಬೇಕೆಂಬ ಕನಸು ನನ್ನ ಆತ್ಮಹತ್ಯೆಯ ಮೂಲಕ ನನಸಾಗುತ್ತಿಲ್ಲ. ಮೂವರು ವ್ಯಕ್ತಿಗಳು ನನಗೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದರಿಂದ ಬೇಸತ್ತಿದ್ದೇನೆ. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಕ್ಷಮಿಸು ಭಾರತ ಮಾತೆ ಎಂದು ಬರೆದುಕೊಂಡಿರುವುದಾಗಿ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶಾಂತ್ ಭಾಸ್ಮೆ ವಿವರಿಸಿದ್ದಾರೆ.
ಕಿರುಕುಳ ನೀಡುತ್ತಿರುವ ಮೂವರಲ್ಲಿ ಓರ್ವ ಈ ಬಗ್ಗೆ ಯಾರ ಜೊತೆಯೂ ಹೇಳಿಕೊಳ್ಳಬಾರದು ಎಂದು ಬೆದರಿಕೆ ಕೂಡ ಹಾಕಿದ್ದನು. ಮೂವರು ಆರೋಪಿಗಳು ನನ್ನ ಮೇಲೆ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದರು. ಈ ಮೂಲಕ ನಿರಂತರವಾಗಿ ನನ್ನ ಮೇಲೆ ದೌರ್ಜನ್ಯವೆಸಗುತ್ತಿದ್ದರು ಎಂದು ಹುಡುಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.