– ಹೈದರಾಬಾದ್ನಲ್ಲಿ ರಾಖಿ ಹವಾ
ಮುಂಬೈ: ಕ್ಯಾನ್ಸರ್ ಚಿಕಿತ್ಸೆಯ ನಂತರ ಕೆಜಿಎಫ್-2ಗಾಗಿ ನಟ ಸಂಜಯ್ ದತ್ ಅವರು ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದಾರೆ.
ಬಾಲಿವುಡ್ ನಟ ಹಾಗೂ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದೇ ಇದೆ. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಈ ಸಂಬಂಧ ವಿದೇಶಕ್ಕೂ ಹೋಗಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ವಾಪಸ್ ಆಗಿರುವ ಅಧೀರ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.
Gearing up for #Adheera!⚔️ #KGFChapter2 pic.twitter.com/Yd2FHSUUYn
— Sanjay Dutt (@duttsanjay) October 16, 2020
ಸ್ಟೈಲಿಶ್ ಲುಕ್ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಜಯ್ ದತ್ ಅವರು ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಸುದ್ದಿ ತಿಳಿದ ಅಧೀರನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಕೊರೊನಾ ಲಾಕ್ಡೌನ್ಗೂ ಮುನ್ನ ಸಂಜಯ್ ದತ್ ಅವರು ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಂತರ ಅವರಿಗೆ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆ ಸೇರಿದ್ದರು. ಇದರಿಂದ ಮತ್ತೆ ಅವರು ಬಂದು ಶೂಟಿಂಗ್ಗೆ ಸೇರಿಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡಿದ್ದವು. ಆದರೆ ಈಗ ಅವರು ಮುಂಬೈಗೆ ವಾಪಸ್ ಬಂದಿದ್ದು, ಸಲೂನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.
ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ವರ್ಕೌಟ್ ಸಹ ಮಾಡುತ್ತಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ಸದ್ಯ ಮಂಗಳೂರಿನಲ್ಲಿ ಕೆಜಿಎಫ್-2 ಸಿನಿಮಾದ ಶೂಟಿಂಗ್ ಮುಗಿದಿದೆ. ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ಮಂಗಳೂರಿನ ಕಡಲ ತೀರದಲ್ಲಿ ನಡೆದಿತ್ತು.
ಹೈದರಾಬಾದಿನಲ್ಲಿ ರಾಖಿ ಹವಾ
ಇದರ ಮಧ್ಯದಲ್ಲಿ ಮಂಗಳೂರಿನಲ್ಲಿ ನಡೆದ ಶೂಟಿಂಗ್ನಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರು, ಮುಂದಿನ ಚಿತ್ರೀಕರಣಕ್ಕೆ ಹೈದರಾಬಾದಿಗೆ ಹಾರಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜಾಕೆಟ್ ಧರಿಸಿ, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು ರಾಖಿ ಭಾಯ್ ನಡೆದುಕೊಂಡು ಹೋಗುತ್ತಿರುವ ಖಡಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ರಾಖಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.