– ಹರಾಜು ಪ್ರಕ್ರಿಯೆಯನ್ನು ದಿಢೀರ್ ತಡೆ ಹಿಡಿದಿದ್ದು ಯಾಕೆ
– ಟೆಲಿಕಾಂ ಸಚಿವಾಲಯಕ್ಕೆ ಜಿಯೋ ಪತ್ರ
ನವದೆಹಲಿ: ಅದಷ್ಟು ಶೀಘ್ರವಾಗಿ ಸ್ಪೆಕ್ಟ್ರಂ ಹರಾಜು ನಡೆಸಬೇಕೆಂದು ರಿಲಯನ್ಸ್ ಜಿಯೋ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ.
ಸೆ.28 ರಂದು ದೂರಸಂಪರ್ಕ ಸಚಿವಾಲಯಕ್ಕೆ ಪತ್ರ ಬರೆದ ಜಿಯೋ, ಸ್ಪೆಕ್ಟ್ರಂ ಹಂಚಿಕೆ ಸಂಬಂಧ ಯಾವ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನುತಡ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹೂಡಿಕೆದಾರರಿಗೂ ಸಮಸ್ಯೆಯಾಗುವುದರ ಜೊತೆಗೆ ದೇಶದ ಆದಾಯಕ್ಕೂ ನಷ್ಟವಾಗುತ್ತಿದೆ ಎಂದು ತಿಳಿಸಿದೆ.
2012ರಲ್ಲಿ ಸುಪ್ರೀಂ ಕೋರ್ಟ್ ಪ್ರತಿವರ್ಷ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕೆಂದು ಸೂಚಿಸಿದೆ. ಹೀಗಿದ್ದರೂ ಯಾವ ಕಾರಣಕ್ಕೆ ಡಿಢೀರ್ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂಬುವುದು ತಿಳಿಯುತ್ತಿಲ್ಲ. ಕಂಪನಿಗಳು ತಮ್ಮ ಬಿಸಿನೆಸ್ಗೆ ಅನುಗುಣವಾಗಿ ಖರೀದಿ ಮಾಡಬಹುದು. ಕಾರ್ಯ ನಿರ್ವಹಿಸುವ ಎಲ್ಲ ಕಂಪನಿಗಳು ಎಲ್ಲ ಬ್ಯಾಂಡ್ ಖರೀದಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ದೇಶೀಯ ಫೋನ್ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ
ಒಟ್ಟು 3.92 ಲಕ್ಷ ಕೋಟಿ ರೂ. ಮೌಲ್ಯದ 1,461.5 ಮೆಗಾಹರ್ಟ್ಸ್ ಪೇರ್ಡ್ ಸ್ಪೆಕ್ಟ್ರಂ ಮತ್ತು 790 ಮೆಗಾಹರ್ಟ್ಸ್ ಅನ್ ಪೇರ್ಡ್ ಸ್ಪೆಕ್ಟ್ರಂ ಇಲ್ಲಿಯವರೆಗೆ ಬಳಕೆಯಾಗಿಲ್ಲ.
ಪತ್ರದಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಹೆಸರನ್ನು ಪ್ರಸ್ತಾಪ ಮಾಡದೇ, ಕೆಲವು ಸೇವಾ ಕಂಪನಿಗಳ ಸ್ಪೆಕ್ಟ್ರಂ ಹರಾಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಕೆಲವರ ಹಿತಾಸಕ್ತಿಗೆ ಪೂರಕವಾಗಿ ರಾಷ್ಟ್ರ ನಿರ್ಮಾಣದ ನೀತಿಗಳನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಟ್ರಾಫಿಕ್ ವಿಥ್ ಪರ್ ಯೂಸರ್ ವಾಯ್ಸ್ ದುಪ್ಪಟ್ಟು ಆಗಿದೆ. ಡೇಟಾ ಬಳಕೆ 50 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ಜಿಯೋ ಕೂಡಲೇ ಸ್ಪೆಕ್ಟ್ರಂ ಹರಾಜು ಮಾಡಿ ಎಂದು ಒತ್ತಾಯ ಮಾಡಿದರೆ ಏರ್ಟೆಲ್ ಮತ್ತು ವಿಐ ಸ್ಪೆಕ್ಟ್ರಂ ದರ ದುಬಾರಿಯಾಗಿದೆ ಎಂದು ಹೇಳಿದೆ.
ಜಿಯೋ 700, 800, 900, 1800, 2100 ಮತ್ತು 2500 ಮೆಗಾಹರ್ಟ್ಸ್ ಬ್ಯಾಂಡ್ ಖರೀದಿಸಲು ಆಸಕ್ತಿ ತೋರಿಸಿದೆ. 5ಜಿ ಸೇವೆಗೆ ಇರುವ 3,300-3600 ಮೆಗಾಹರ್ಟ್ಸ್ ಬ್ಯಾಂಡ್ ಖರೀದಿಸಲು ಜಿಯೋ ಆಸಕ್ತಿ ತೋರಿಸಿಲ್ಲ.
ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್) ಬಿಡುಗಡೆ ಮಾಡಿದ ಜೂನ್ ತಿಂಗಳ ವರದಿಯಲ್ಲಿ ವಿಐ 48 ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ ಏರ್ಟೆಲ್ 11 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್ಎನ್ಎಲ್ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇತ್ತ ಜಿಯೋಗೆ 45 ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.