– ಕಗ್ಗಂಟನ್ನ ಬಿಡಿಸೇ ಬಿಡಿಸ್ತೇವೆ ಅನುಮಾನ ಬೇಡ
ಚಿಕ್ಕಮಗಳೂರು: ಬಾಬಾಬುಡನ್ ದರ್ಗಾದಲ್ಲಿ ಹಿಮಾಮ್, ಮೌಲ್ವಿ ಯಾರು ಬೇಕಾದರೂ ಹೋಗಿ ಪೂಜೆ ಮಾಡಲಿ, ನಮ್ಮದ್ದೇನು ತಕರಾರಿಲ್ಲ. ಆದರೆ ದತ್ತಪೀಠದಲ್ಲಿ ದತ್ತಾತ್ರೇಯರ ಆರಾಧನೆ ಹಿಂದೂ ಧಾರ್ಮಿಕ ವಿಧಿ ಪ್ರಕಾರ ನಡೆಯಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆ ಮತ್ತು ಹೋರಾಟ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರೋ ದತ್ತ ಜಯಂತಿಯ ಮೊದಲ ದಿನವಾದ ಇಂದಿನ ಅನುಸೂಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮಧೇನು ಗಣಪತಿ ದೇವಾಲಯದವರೆಗೂ ಮೆರವಣಿಗೆಯಲ್ಲಿ ಸಾಗಿ ಬಂದು ದತ್ತಪೀಠದಲ್ಲಿ ನಡೆದ ಹೋಮ-ಹವನದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಯೋಧ್ಯೆ-ಕಾಶ್ಮೀರ ಯಾವುದರಲ್ಲೂ ಹಿಂದೆ ಸರಿದಿಲ್ಲ. ದತ್ತಪೀಠದ ವಿಷಯದಲ್ಲೂ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ. ಇದು ಸತ್ಯದ ಪರ ಇರುವ ಹೋರಾಟ. ಕಂದಾಯ ಹಾಗೂ ಮುಜರಾಯಿ ಎಲ್ಲ ದಾಖಲೆಗಳಲ್ಲಿ ದತ್ತಾತ್ರೇಯ ಪೀಠ ಬೇರೆ ಇದೆ. ಬಾಬಾಬುಡನ್ ದರ್ಗಾ ಬೇರೆ ಇದೆ. ಬಾಬಾಬುಡನ್ ಹೆಸರಲ್ಲಿ ದತ್ತಾತ್ರೇಯ ಪೀಠದ ಮೇಲೆ ಅತಿಕ್ರಮಣ ಮಾಡಿರೋದನ್ನ ವಿರೋಧಿಸಿ ಜನಜಾಗೃತಿ ಹಾಗೂ ನ್ಯಾಯಾಲಯದ ಮೂಲಕ ಹೋರಾಟ ನಡೆದಿದೆ ಮಾತೃಶಕ್ತಿ ಜಾಗೃತಿಯ ಮೂಲಕ ದತ್ತಪೀಠದ ಅಂತಿಮ ಹೋರಾಟದಲ್ಲಿ ನಾವು ವಿಜಯ ಸಾಧಿಸುತ್ತೇವೆ ಎಂಬ ನಂಬಿಕೆ ಇದೆ ಎಂದರು.
ಹತ್ತಾರು ಬಾರಿ ಹೇಳಿದ್ದೇನೆ. ಕೋರ್ಟ್ ಮೂಲ ದಾವೆಯನ್ನ ಎತ್ತಿಹಿಡಿದು ವಕ್ಫ್ ಬೋರ್ಡಿಗೆ ಸೇರಿಸಿದ್ದು ಅಕ್ರಮ ಎಂದು ಹೇಳಿ ವಾಪಸ್ ಮುಜರಾಯಿ ಇಲಾಖೆಗೆ ಸೇರಿಸಿದೆ. ಮಜರಾಯಿಗೆ ಸೇರಿಸಿದ ಬಳಿಕ ಹಿಂದೂ ಅರ್ಚಕರ ನೇಮಕವಾಗಬೇಕು. ನ್ಯಾಯಾಲಯದ ಮುಂದೆ ಇದೆ. ಆ ಕಗ್ಗಂಟನ್ನ ಬಿಡಿಸಿಯೇ ಬಿಡಿಸುತ್ತೇವೆ. ಯಾರಿಗೂ ಅನುಮಾನವೇ ಬೇಡ. ಅದು ನಮ್ಮ ಸಂಕಲ್ಪ. ನಾವು ಅದರಿಂದ ಹಿಂದೆ ಸರಿಯಲ್ಲ ಎಂದರು.
ಸುಪ್ರೀಂ ಕೋರ್ಟ್ ಹಿಂದೂ ಅರ್ಚಕರ ನೇಮಕಕ್ಕೆ ತೀರ್ಮಾನ ಕೈಗೊಳ್ಳಲು ಮಾತ್ರ ಅಧಿಕಾರ ಕೊಟ್ಟಿದ್ದು. ಆದರೆ ಆ ತೀರ್ಪಿಗೆ ವಿರುದ್ಧವಾಗಿ ನಾಗಮೋಹನ್ ದಾಸ್ ಸಮಿತಿ ಮಾಡಿದ್ದಾರೆ. ನೀವು ಜುಡಿಷಿಯರಿ ಕಮಿಟಿ ಮಾಡಿ ಎಂದು ಹೇಳಿರಲಿಲ್ಲ. ಸುಪ್ರೀಂ ಕೋರ್ಟಿಗೆ ಮುಜರಾಯಿ ಆಯುಕ್ತರು ಸೀಲ್ಡ್ ಕವರ್ ನಲ್ಲಿ ಸುಪ್ರಿಂ ಕೋರ್ಟಿಗೆ ಸಲ್ಲಿಸಿದ್ದರು. ಅದರಲ್ಲಿ ಹಿಂದೂ ಅರ್ಚಕರ ನೇಮಕ ಮಾಡಬೇಕೆಂದು ಇತ್ತು. ಅದಕ್ಕೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳಿ ಅಂತ ಮಾತ್ರ ಇತ್ತು. ಅವರು ಹಿಂದೂ ಅರ್ಚಕರ ನೇಮಕ ಮಾಡೋದಕ್ಕಷ್ಟೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ವ್ಯತಿರಿಕ್ತವಾಗಿ ಮಾಡಿದ್ದಾರೆ. ಅದಕ್ಕೆ ಸ್ಟೇ ತೆಗೆದುಕೊಂಡಿದೆ. ಅದರ ಅಂತಿಮ ತೀರ್ಪು ಬರೋದು ಬಾಕಿ ಇದೆ. ಅಂತಿಮ ತೀರ್ಪಿನಲ್ಲಿ ಸತ್ಯದ ಪರ ತೀರ್ಪು ಬರುತ್ತೆ. ನಮಗೆ ವಿಶ್ವಾಸವಿದೆ. ನಮ್ಮ ಪರ ತೀರ್ಪು ಬಂದೇ ಬರುತ್ತೆ, ಸತ್ಯ ನಮ್ಮ ಪರ ಇದೆ ಎಂದರು.