ರಾಯಚೂರು: ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯವನ್ನ ತೆರವು ಮಾಡಿರುವ ಘಟನೆ ರಾಯಚೂರಿನ ಯರಮರಸ್ ಕ್ಯಾಂಪ್ನಲ್ಲಿ ನಡೆದಿದೆ. ಮಾಹಿತಿಯೂ ನೀಡದೇ ಶಾಲೆ ಇಲ್ಲದ ವೇಳೆ ಶೌಚಾಲಯ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ.
ರಾಯಚೂರು ಸರ್ಕಾರಿ ಇಂಜನಿಯರಿಂಗ್ ಕಾಲೇಜು ಗೇಟ್ ಗೆ ಎದುರುಗಡೆ ಇದೆ ಅಂತ ಏಕಾಏಕಿ ಶೌಚಾಲಯ ತೆರವು ಮಾಡಲಾಗಿದೆ. ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯರು ಪ್ರೌಢಶಾಲೆ ವಿದ್ಯಾರ್ಥಿಗಳ ಬಗ್ಗೆ ನಿಷ್ಕಾಳಜಿ ತೋರಿದ್ದು ತಪ್ಪು ಅಂತ ಪೋಷಕರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ವ ಮಾಹಿತಿ ನೀಡಿ ಪರ್ಯಾಯ ವ್ಯವಸ್ಥೆ ಮಾಡದೇ ಒಂದೇ ಬಾರಿಗೆ ಜೆಸಿಬಿಯಿಂದ ತೆರವು ಮಾಡಲಾಗಿದೆ.
ಕೊನೆಗೆ ವಿದ್ಯಾರ್ಥಿಗಳ ಆಕ್ರೋಶ, ಪ್ರತಿಭಟನೆಗೆ ಮಣಿದು ನೂತನ ಶೌಚಾಲಯ ಕಟ್ಟಿಸಿಕೊಡುವುದಾಗಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆಡಳಿತ ಮಂಡಳಿ ಭರವಸೆ ನೀಡಿದೆ. ಹೊಸ ಶೌಚಾಲಯ ನಿರ್ಮಾಣವಾಗುವವರೆಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಈ ಶಾಲೆಯಲ್ಲಿ 178 ಮಕ್ಕಳು ಓದುತ್ತಿದ್ದು ಎಲ್ಲರಿಗೂ ತೊಂದರೆಯಾಗಿದೆ.