– ಅತ್ತೆ ಮನೆಯಿಂದ ಬರುತ್ತಿದ್ದಾಗ ಘಟನೆ
ಚಾಮರಾಜನಗರ: ಪತಿ ಮತ್ತು ಪತ್ನಿ ಇಬ್ಬರೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೇಮಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ಕೆಂಪಣ್ಣ ಹಾಗೂ ಅವರ ಪತ್ನಿ ಪೂರ್ಣಿಮಾ ಆತ್ಮಹತ್ಯೆಗೆ ಶರಣಾದವರು. ಪೂರ್ಣಿಮಾ ತನ್ನ ತಾಯಿ ಮನೆಯಲ್ಲಿದ್ದಳು. ಇಂದು ಕೆಂಪಣ್ಣ ಆಲ್ದೂರಿನ ಅತ್ತೆ ಮನೆಯಲ್ಲಿದ್ದ ಪತ್ನಿ ಪೂರ್ಣಿಮಾ ಹಾಗೂ ಮಗುವನ್ನು ಕರೆದುಕೊಂಡು ಬೈಕಿನಲ್ಲಿ ಬರುತ್ತಿದ್ದರು.
ಮಾರ್ಗಮದ್ಯೆ ಕಬಿನಿ ಕಾಲುವೆ ಬಳಿ ಪೂರ್ಣಿಮಾ ಶೌಚಾಲಯಕ್ಕೆ ಹೋಗಬೇಕೆಂದು ಬೈಕ್ ನಿಲ್ಲಿಸುವಂತೆ ಪತಿಗೆ ಹೇಳಿದ್ದಾಳೆ. ಪತಿ ಕೆಂಪಣ್ಣ ಬೈಕ್ ನಿಲ್ಲಿಸಿದ್ದಾರೆ. ಆದರೆ ಪೂರ್ಣಿಮಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನು ಗಮನಿಸಿದ ಕೆಂಪಣ್ಣ ತನ್ನ ಮೂರು ವರ್ಷದ ಗಂಡು ಮಗುವನ್ನು ಬೈಕ್ ಮೇಲೆ ಕೂರಿಸಿ ಪತ್ನಿಯನ್ನು ರಕ್ಷಿಸಲು ಕಾಲುವೆಗೆ ಹಾರಿದ್ದಾರೆ. ಆದರೆ ಕೆಂಪಣ್ಣ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಪತಿ ಮತ್ತು ಪತ್ನಿ ಇಬ್ಬರು ಕಾಲುವೆ ಬಿದ್ದಿದ್ದನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೂರ್ಣಿಮಾಳ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.