ಬೆಂಗಳೂರು: ಕಾಂಗ್ರೆಸ್ ಗ್ರಾಮ ಪಂಚಾಯ್ತಿ ಚುನಾವಣೆ ಸಿದ್ಧತೆ ಸಭೆಯಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಪುತ್ರ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ.
ಕಾಂಗ್ರೆಸ್ ನ ಚುನಾವಣಾ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ಶರತ್ ಬಚ್ಚೇಗೌಡ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗದಿದ್ದರೂ, ಕಾಂಗ್ರೆಸ್ ನಾಯಕರ ಜೊತೆ ಶರತ್ ಬಚ್ಚೇಗೌಡ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ಶರತ್ ಸಿದ್ಧವಾಗಿದ್ದಾರೆ ಎನ್ನಲಾಗಿದೆ. ಪಕ್ಷ ಸೇರ್ಪಡೆಗೂ ಮುನ್ನವೇ ಕಾಂಗ್ರೆಸ್ ನಾಯಕರ ಜೊತೆ ವೇದಿಕೆ ಹಂಚಿಕೊಂಡು ತಮ್ಮ ಮುಂದಿನ ಹಾದಿ ಕಾಂಗ್ರೆಸ್ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ ಎಂಬುವುದು ಶಾಸಕರ ಆಪ್ತರ ಮಾತು.
ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿದ್ದ ಶರತ್ ಬಚ್ಚೇಗೌಡ ಪಕ್ಷೇತರರರಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಶರತ್ ಸ್ಪರ್ಧೆ ಹಿನ್ನೆಲೆ ಎಂಟಿಬಿ ನಾಗರಾಜ್ ಸೋಲು ಕಂಡಿದ್ದರು. ತಮ್ಮ ಸೋಲಿಗೆ ಸಂಸದ ಬಚ್ಚೇಗೌಡರು ಮಗನ ಪರವಾಗಿ ಕೆಲಸ ಮಾಡಿದ್ದೇ ಕಾರಣ ಎಂದು ಎಂಟಿಬಿ ಆರೋಪಿಸಿದ್ದರು.