– ಬುದ್ಧಿಮಾಂದ್ಯ ತಂದೆಯ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಲ್ಲಲ್ಲಿ ಹೊಡೆದ ಬಾಲಕಿ
ಚೆನ್ನೈ: ತನಗೆ ಕಲ್ಲಿನಲ್ಲಿ ಹೊಡೆದಳು ಎಂಬ ಕ್ಷುಲ್ಲಕ ಕಾರಣಕ್ಕೆ 19 ವರ್ಷದ ಯುವಕನೋರ್ವ 8 ವರ್ಷದ ಮುಗ್ದ ಬಾಲಕಿಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕಲ್ವಿಲೈನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಮುತಾರ್ ಎಂದು ಗುರುತಿಸಲಾಗಿದೆ. ಎಂಟು ವರ್ಷದ ಮುತಾರ್ ತನ್ನ ತಾಯಿ ಹಾಗೂ ಅಣ್ಣನ ಜೊತೆ ಕಲ್ವಿಲೈನಲ್ಲಿ ವಾಸವಿದ್ದಳು. ಅದೇ ಜಾಗದಲ್ಲಿ ವಾಸವಿದ್ದ ಆರೋಪಿ ಮುತೀಶ್ವರನ್ ಮನೆಗೆ ದಿನ ಟಿವಿ ನೋಡಲು ಹೋಗುತ್ತಿದ್ದಳು. ಈ ವೇಳೆ ಈ ಘಟನೆ ನಡೆದಿದ್ದು, ಸಾಥನ್ಕುಲಂ ಪೊಲೀಸರು ಆರೋಪಿ ಮುತೀಶ್ವರನ್ನನ್ನು ಬಂಧಿಸಿದ್ದಾರೆ.
ಬುಧವಾರ ಬೆಳಗ್ಗೆ ಸುಮಾರು 11.30 ವೇಳೆ ಮುತಾರ್ ಆರೋಪಿ ಮನೆಗೆ ಟಿವಿ ನೋಡಲು ಹೋಗಿದ್ದಾಳೆ. ಈ ವೇಳೆ ಮುತೀಶ್ವರನ್ ಆತನ ಬುದ್ಧಿಮಾಂದ್ಯ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಅವನ ವಿರುದ್ಧ ಜಗಳ ಮಾಡಿದ್ದಾಳೆ ಜೊತೆಗೆ ಕಲ್ಲಿನಿಂದ ಹೊಡೆದಿದ್ದಾಳೆ. ಈ ವೇಳೆ ಕೋಪಗೊಂಡು ಮುತೀಶ್ವರನ್ ಆಕೆಯನ್ನು ಕತ್ತುಹಿಸುಕಿದ್ದಾನೆ. ಆಗ ಮುತಾರ್ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆಗ ಅವಳನ್ನು ಒಂದು ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿ ಮುಚ್ಚಳ ಹಾಕಿದ್ದಾನೆ.
ಬಾಲಕಿಯನ್ನು ಸಾಯಿಸಿ ಅವಳನ್ನು ಡ್ರಮ್ಗೆ ತುಂಬಿದ ಮುತೀಶ್ವರನ್ ಒಂದು ಗಂಟೆಯ ನಂತರ ಅವನ ಸ್ನೇಹಿತ, ನಂದೀಶ್ವರನ್ ಬಳಿ ಹೋಗಿದ್ದಾನೆ. ನಮ್ಮ ಮನೆಯಲ್ಲಿ ಕಸ ತುಂಬಿದ ಡ್ರಮ್ ಇದೆ ಅದನ್ನು ಎಸೆದು ಬರಲು ನನಗೆ ನೀನು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ನಂದೀಶ್ವರ್ ಒಪ್ಪಿಕೊಂಡಿದ್ದಾನೆ ನಂತರ ಇಬ್ಬರು ಸೇರಿ ಬೈಕಿನಲ್ಲಿ ಒಂದೂವರೆ ಕಿ.ಮೀ ಡ್ರಮ್ ಅನ್ನು ಸಾಗಿಸಿದ್ದಾರೆ. ಅಲ್ಲಿ ಒಂದು ಸೇತುವೆ ಬಳಿ ಬೈಕ್ ನಿಲ್ಲಿಸಿ ಬಾಲಕಿಯ ಮೃತದೇಹವನ್ನು ಚಾನೆಲ್ಗೆ ಎಸೆದು ಬಂದಿದ್ದಾರೆ.
ಈ ವೇಳೆ ಮಗಳಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಮುತಾರ್ ಕುಟುಂಬ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ನಂತರ ಸ್ಥಳೀಯರು ಇಬ್ಬರು ಯುವಕರು ಇಲ್ಲಿ ಅನುಮಾಸ್ಪದವಾಗಿ ಬಂದಿದ್ದರು ಎಂದು ಹೇಳಿದ್ದಾರೆ. ಅದೇ ಜಾಗದಲ್ಲಿ ಮುತಾರ್ ಮೃತದೇಹ ಸಿಕ್ಕಿದೆ. ಆಗ ಪೊಲೀಸ್ ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಯುವಕ ತಾನೇ ಕೊಲೆ ಮಾಡಿದ್ದು ಎಂದು ಒಪ್ಪಿಕೊಂಡಿದ್ದು, ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.