ಅಹಮದಾಬಾದ್: ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಇದೀಗ ಕೊಹ್ಲಿ ತನ್ನ ಬ್ಯಾಟಿಂಗ್ ಫಾರ್ಮ್ಗೆ ಮರಳಲು ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ಅವರೊಂದಿಗೆ ಮಾಡಿದ ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಮತ್ತು ಮೊದಲ ಟಿ 20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ಕಾರಣ ಅಭಿಮಾನಿಗಳಿಂದ ಭಾರಿ ಟೀಕೆಗೆ ಒಳಗಾಗಿದ್ದರು. ವಿರಾಟ್ ಬ್ಯಾಟಿಂಗ್ ಫಾರ್ಮ್ ಕೂಡ ಕೈ ಕೊಟ್ಟಿತ್ತು. ಆದರೆ ಎರಡನೇ ಟಿ20 ಯಲ್ಲಿ ವಿರಾಟ್ 73 ರನ್(49 ಎಸೆತ,5 ಬೌಂಡರಿ, 3 ಸಿಕ್ಸರ್) ಸಿಡಿಸಿ ಬ್ಯಾಟಿಂಗ್ ಫಾರ್ಮ್ಗೆ ಮರಳಿದ್ದರು. ಆದರೆ ಪಂದ್ಯದ ಬಳಿಕ ಬ್ಯಾಟಿಂಗ್ ಲಯಕ್ಕೆ ಮರಳಲು ಎಬಿಡಿ ಜೊತೆ ಮಾಡಿದ ಆ ಒಂದು ಸ್ಪೆಷಲ್ ಚಾಟ್ ಕಾರಣ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಎಬಿಡಿ ಜೊತೆ ಮಾಡಿದ ಸ್ಪೆಷಲ್ ಚಾಟ್ ಬಗ್ಗೆ ಮಾತನಾಡಿದ ಕೊಹ್ಲಿ ನಾನು ಪಂದ್ಯದ ಮೊದಲು ಎಬಿಡಿಗೆ ಸಂದೇಶ ಕಳುಹಿಸಿದ್ದೆ. ಅವರು ನನಗೆ ನೀನು ಬಾಲ್ನ್ನು ಸರಿಯಾಗಿ ಗಮನಿಸು ಎಂದಿದ್ದರು. ನಾನು ಅವರು ತಿಳಿಸಿದಂತೆ ಬಾಲ್ನ್ನು ಸರಿಯಾಗಿ ಗಮನಿಸಿ ಆಟವಾಡಿದೆ ಎಂದು ಸ್ನೇಹಿತನ ಜೊತೆಗಿನ ವಿಶೇಷ ಸಂದೇಶವನ್ನು ಕೊಹ್ಲಿ ಎಲ್ಲರೊಂದಿಗೆ ಹಂಚಿಕೊಂಡರು.
ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಪರ ಇಬ್ಬರು ಆಡುತ್ತಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ವೇಳೆ ಕೊಹ್ಲಿ ಎಬಿಡಿ ಆರ್ಸಿಬಿಯ ಏಲಿಯನ್ ಆಟಗಾರನೆಂದು ವಿಶೇಷವಾಗಿ ಬಣ್ಣಿಸಿದ್ದರು.
2ನೇ ಟಿ20 ಪಂದ್ಯದಲ್ಲಿ ರಾಹುಲ್ ಔಟ್ ಆದ ಬಳಿಕ ಕ್ರಿಸ್ಗೆ ಬಂದು ಉತ್ತಮವಾಗಿ ಆಡಿ ಕೊನೆಯವರೆಗೆ ಬ್ಯಾಟಿಂಗ್ ಮಾಡಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಇದರೊಂದಿಗೆ ಇದೇ ಪಂದ್ಯದಲ್ಲಿ ವಿರಾಟ್ ಟಿ20 ಕ್ರಿಕೆಟ್ ಪಂದ್ಯದಲ್ಲಿ 3 ಸಾವಿರ ರನ್ ಸಿಡಿಸಿದ ವಿಶ್ವದ ಮೊದಲ ಪುರುಷ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆಗೂ ಕಾರಣರಾಗಿದ್ದರು.