ಹುಬ್ಬಳ್ಳಿ: ಕೋವಿಡ್ ಸೋಂಕು ಕಡಿಮೆಯಾದರು ಸಹ 3 ನೇ ಅಲೆ ತಡೆಗಟ್ಟುವ ದೃಷ್ಟಿಯಿಂದ ಎಲ್ಲರೂ ಎಚ್ಚರಿಕೆ ವಹಿಸಬೇಕು ಹಾಗೂ ಈ ಬಾರಿ ಬಕ್ರಿದ್ಗೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಗೋಪಾಲಕೃಷ್ಣ ಹೇಳಿದ್ದಾರೆ.
ಬಕ್ರಿದ್ ಹಬ್ಬದಂದು ಮಸೀದಿಗಳಲ್ಲಿ ಸ್ಯಾನಿಟೈಜಿಂಗ್ ಮಾಡಿ ಹಾಗೂ ಪ್ರಾರ್ಥಿಸುವಾಗ 6 ಅಡಿ ಅಂತರ ಕಾಪಾಡಿಕೊಂಡು ಸುಲಲಿತ ಮತ್ತು ಸುರಕ್ಷತೆಯಿಂದ ಆಚರಿಸಬೇಕು. ಹಬ್ಬದಂದು ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಒಂದು ಬಾರಿಗೆ 50 ಜನರಿಗೆ ಅವಕಾಶ ನೀಡಲಾಗಿದ್ದು, ನಂತರ ಮತ್ತೆ 50 ಜನರು ಪಾಳೆಯ ರೂಪದಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ ಈದ್ಗಾದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಿನಿ ವಿಧಾನಸೌಧದ ತಹಶೀಲ್ದಾರ ಕಾರ್ಯಾಲಯದಲ್ಲಿ ಬಕ್ರೀದ್ ಹಬ್ಬದ ಕುರಿತು ಏರ್ಪಡಿಸಲಾಗಿದ್ದ, ಮುಸ್ಲಿಂ ಮುಖಂಡರ ಜೊತೆ ವೀಡಿಯೋ ಸಂವಾದದ ಮೂಲಕ ಅವರು ಮಾತದ ಅವರು, 60 ವಯಸ್ಸು ಮೇಲ್ಪಟ್ಟ ಹಾಗೂ 10 ವರ್ಷದ ಕೆಳಗಿನವರಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ಅವಕಾಶವಿರುವುದಿಲ್ಲ. ಅವರು ಮನೆಯಲ್ಲಿಯೇ ಪ್ರಾರ್ಥಿಸಬೇಕು. ಮಸೀದಿಗೆ ಬರುವ ಮುನ್ನ ದೇಹದ ತಾಪಮಾನ ಪರೀಕ್ಷೆ ಮಾಡಿಸಿರಬೇಕು. ಹಸ್ತಲಾಘವ ಮತ್ತು ಆಲಿಂಗನ ಮಾಡುವುದು ನಿಷೇಧಿಸಲಾಗಿದೆ. ಆಸ್ಪತ್ರೆ, ಶಾಲಾ ಕಾಲೇಜು ಆವರಣ, ಆಟದ ಮೈದಾನ , ಪುಟ್ಪಾತ್ ಹಾಗೂ ಉದ್ಯಾನವನದ ಒಳಗಡೆ ಮತ್ತು ಹೊರಗಡೆ ಬಲಿದಾನ ಮಾಡುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.
ಸಭೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಜೊತೆಗೆ ಈದ್ಗಾ ಮೈದಾನದಲ್ಲಿ 50 ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪವಿಭಾಗಾಧಿಕಾರಿ ಸಾಮೂಹಿಕವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುವುದನ್ನು ನಿಷೇಧಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುತ್ತೇನೆ. ಸರ್ಕಾರ ಆದೇಶ ಪ್ರಕಾರ ರಾಜ್ಯದಾದ್ಯಂತ ಈದ್ಗಾ ಮೈದಾನದಲ್ಲಿ ಪಾರ್ಥನೆ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶಹರ ತಹಶೀಲ್ದಾರ ಶಶಿಧರ ಮಾಡ್ಯಾಳ, ಅಂಜುಮನ್ ಸಂಸ್ಥೆ ಅಧ್ಯಕ್ಷ ಯೂಸಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ