ಧಾರವಾಡ: ಎಬಿವಿಪಿ ಧಾರವಾಡ ಶಾಖೆಯ ವತಿಯಿಂದ ‘ಆಕ್ಸಿಜನ್ ಚಾಲೆಂಜ್’ ಅಭಿಯಾನ ಇಡೀ ಕರ್ನಾಟಕದಾದ್ಯಂತ ನಡೆಯುತ್ತಿದ್ದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು 1 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಾಳೆ ಎಬಿವಿಪಿಯಿಂದ ಒಂದೇ ದಿನ 1 ಸಾವಿರ ಸಸಿಗಳನ್ನು ನೆಡಲು ಧಾರವಾಡ ಎಬಿವಿಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಿಸರ ಸಂರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ವಿನೂತನ ಅಭಿಯಾನ, ಯೋಜನೆ ಹಾಗೂ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿಗಳನ್ನ ನೆಡುವುದು ಅಷ್ಟೆ ಅಲ್ಲದೆ, ಅವುಗಳನ್ನ ಪಾಲನೆ ಪೋಷಣೆ ಮಾಡುವಂತಹ ಮಹತ್ತರ ಕೆಲಸವನ್ನು ಮಾಡುತ್ತಿದೆ.
ಕೊರೊನಾ ಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯ ಸುತ್ತಲಿನ ಪರಿಸರದಲ್ಲಿ ಗಿಡ ಮರಗಳನ್ನ ನೆಟ್ಟು ಪಾಲನೆ ಪೋಷಣೆ ಮಾಡಿ, ಸಮಾಜಕ್ಕೂ ಹಾಗೂ ಮುಂದಿನ ಪಿಳಿಗೆಗೂ ಅನುಕೂಲವಾಗುವ ರೀತಿಯಲ್ಲಿ ಸುಂದರ ಪರಿಸರವನ್ನು ನಿರ್ಮಾಣ ಮಾಡಬೇಕು ಎಂದು ಎಬಿವಿಪಿ ಸಂಘಟನೆ ಕರೆ ಕೊಟ್ಟಿದೆ.