– ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದ ಬಾಲಕಿ ಪ್ರಕರಣ
ಶಿವಮೊಗ್ಗ: ಅಪ್ರಾಪ್ತ ಬಾಲಕಿಯೋರ್ವಳ ಮದುವೆ ತಡೆದ ಪ್ರಕರಣ ಇದೀಗ ಶಿವಮೊಗ್ಗ ಜಿಲ್ಲೆಯ ಪೊಲೀಸ್ ವ್ಯವಸ್ಥೆಯೇ ಕ್ವಾರಂಟೈನ್ಗೆ ಒಳಗಾಗುವಂತೆ ಮಾಡಿದೆ.
ಕಳೆದ ಐದು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದ ಅಪ್ರಾಪ್ತ ಬಾಲಕಿಯೋರ್ವಳಿಗೆ ಆಕೆಯ ಪೋಷಕರು ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಶಿಕಾರಿಪುರ ಗ್ರಾಮಾಂತರ ಪೊಲೀಸರಿಗೆ ಬಂದಿದೆ. ಈ ಮಾಹಿತಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಲ್ ಇನ್ಸ್ ಪೆಕ್ಟರ್, ಬಾಲಕಿಯನ್ನು ವಶಕ್ಕೆ ಪಡೆದು ಆಕೆಯನ್ನು ಶಿವಮೊಗ್ಗದ ಸುರಭಿ ಸಖಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಬಾಲಕಿಯನ್ನು ಸಖಿ ಕೇಂದ್ರಕ್ಕೆ ಒಪ್ಪಿಸಿದ ಸಿಪಿಐ ಅವರು ನಂತರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಆದರೆ ನಿನ್ನೆ ಬಂದ ಅಪ್ರಾಪ್ತೆಯ ಕೊರೊನಾ ವರದಿ ಇಡೀ ಪೊಲೀಸ್ ವ್ಯವಸ್ಥೆಯನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಅಪ್ರಾಪ್ತ ಬಾಲಕಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಆದ್ದರಿಂದ ಜಿಲ್ಲೆಯ ಓರ್ವ ಎಎಸ್ಪಿ, 5 ಮಂದಿ ಡಿವೈಎಸ್ಪಿ, 12 ಮಂದಿ ಸಿಪಿಐ, ಸೇರಿದಂತೆ ಸಖಿ ಕೇಂದ್ರದ ಸಿಬ್ಬಂದಿ ಅವರುಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಈಗ ಗೃಹ ಇಲಾಖೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ಎಎಸ್ಪಿ, 4 ಮಂದಿ ಡಿವೈಎಸ್ಪಿ ಹಾಗೂ 6 ಮಂದಿ ಸಿಪಿಐ ಅವರುಗಳನ್ನು ಜಿಲ್ಲೆಗೆ ಕರ್ತವ್ಯಕ್ಕೆ ನಿಯೋಜನೆಗೊಳಿಸಿ ಎಂದು ಆದೇಶಿಸಿದೆ.