ಚಿಕ್ಕೋಡಿ(ಬೆಳಗಾವಿ): ಅಕ್ರಮವಾಗಿ ಬೆಳ್ಳಿ ಸಾಗಾಟ ಮಾಡುತ್ತಿದ್ದ ಮೂವರನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೋಲೀಸರು ಬಂಧಿಸಿದ್ದು, 49 ಕೆ.ಜಿ ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕೆರಲೆ ಗ್ರಾಮದ ಸುಹಾಸ ಬಾಸ್ಕರ ಗಾಯಕವಾಡ (45), ಅದೇ ಗ್ರಾಮದ ಸಂದೀಪ ಸುಹಾಸ ಗಾಯಕವಾಡ (38) ಹಾಗೂ ಬೆಳಗಾವಿ ಜಿಲ್ಲೆಯ ಹಿಂಡಲಗಾದ ಗೋಕುಲ ನಗರ ನಿವಾಸಿ ಮಾರುತಿ ಅಮೃತ ಮುತಗೆಕರ (38) ಎಂದು ಗುರುತಿಸಲಾಗಿದೆ.
ಇವರು ಮಹಾರಾಷ್ಟ್ರದ ಕೊಲ್ಲಾಪೂರ ಕಡೆಯಿಂದ ಬೆಳಗಾವಿಗೆ ತೆರಳುವಾಗ ಎನ್ ಎಚ್ – 4 ರಸ್ತೆಯಲ್ಲಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೂಲ್ ನಾಕಾ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಯಾವುದೇ ದಾಖಲಾತಿಗಳಿಲ್ಲದೆ ಬೆಳ್ಳಿಯ ಆಭರಣಗಳನ್ನು ಕೊರಿಯರ್ ಬಳಕೆಗೆ ಬಳಸುತ್ತಿದ್ದ ಕ್ರೂಷರ್ ವಾಹನ ಮೂಲಕ ಸಾಗಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ತಡೆದು ತಪಾಸಣೆ ನಡೆಸಿದಾಗ 47 ಕೆ.ಜಿ 990 ಗ್ರಾಂ ಅಂದಾಜು 14,39,670 ಬೆಲೆಯ ಆಭರಣಗಳು ಸಿಕ್ಕಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಯಮಕನಮರಡಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಪಾಟೀಲ್ ಹಾಗೂ ಸಿಬ್ಬಂದಿ ಇದ್ದರು. ಪೋಲಿಸರ ಈ ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಯಮಕನಮರಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.