ಮಂಗಳೂರು: ಸ್ನಾನಕ್ಕೆಂದು ನದಿಗೆ ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಮಾರಧಾರ ನದಿಯಲ್ಲಿ ನಡೆದಿದೆ.
ಅರ್ಫಾದ್(22) ಮೃತಪಟ್ಟ ದುರ್ದೈವಿ. ಅರ್ಫಾದ್ ಕೊಯಿಲ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರನಾಗಿದ್ದು, ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗೆ ಇಳಿದಿದ್ದನು.
ನದಿಗೆ ಇಳಿದ ಸ್ವಲ್ಪ ಹೊತ್ತಿನ ಬಳಿಕ ಅರ್ಫಾದ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದನು. ಅರ್ಫಾದ್ ಕಣ್ಮರೆ ಆಗುತ್ತಿದ್ದಂತೆ ಸ್ನೇಹಿತರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅರ್ಫಾದ್ಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಸ್ಥಳಕ್ಕೆ ಕಡಬ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು, ಭೇಟಿ ನೀಡಿದ್ದರು. ಕೆಲ ಸಮಯದ ಹುಡುಕಾಟದ ಬಳಿಕ ಯುವಕನ ಮೃತದೇಹ ನದಿ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.