ಭುವನೇಶ್ವರ: ಒಡಿಶಾದ (Odisha) ಬಾಲಸೋರ್ನಲ್ಲಿ (Balasore) ಭೀಕರ ರೈಲು ಅಪಘಾತ (Train Accident) ನಡೆದಿದ್ದು, ಅಪಘಾತದ ನಂತರ ಗಾಯಾಳುಗಳಿಗೆ ರಕ್ತದಾನ (Blood Donation) ಮಾಡುವ ಸಲುವಾಗಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 261ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡು ಬಾಲಸೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಜನರು ಸ್ವಯಂಪ್ರೇರಿತರಾಗಿ ಗಾಯಾಳುಗಳಿಗೆ ರಕ್ತದಾನ ಮಾಡಲು ಕ್ಯೂನಲ್ಲಿ ನಿಂತಿದ್ದಾರೆ. ಅಪಘಾತದ ಸುದ್ದಿ ಹೊರಬೀಳುತ್ತಿದ್ದಂತೆ ರಾತ್ರಿಯಿಂದಲೇ ಸ್ಥಳೀಯ ನಿವಾಸಿಗಳು, ಅದರಲ್ಲೂ ಯುವಕರು ರಕ್ತದಾನ ಮಾಡಲು ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಕಾರಣ- ಪ್ರಾಥಮಿಕ ವರದಿ
ಸುಮಾರು 25 ಸ್ವಯಂಸೇವಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಬಂದಿದ್ದೇವೆ. ನಮ್ಮ ರಕ್ತ ಒಬ್ಬರ ಜೀವ ಉಳಿಸಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ ಎಂದು ಸರತಿ ಸಾಲಿನಲ್ಲಿ ನಿಂತಿದ್ದ ಸ್ವಯಂ ಸೇವಕರೊಬ್ಬರು ಹೇಳಿದ್ದಾರೆ. ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ (Pradeep Kumar Jena) ಕೂಡ ಇಂತಹ ದುರಂತದ ಸಮಯದಲ್ಲಿ ರಕ್ತದಾನ ಮಾಡಿದ ಸ್ವಯಂಸೇವಕರಿಗೆ ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಣೆ
ಬಾಲಾಸೋರ್ನಲ್ಲಿ ರಾತ್ರಿಯಿಡೀ 500 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ. ಪ್ರಸ್ತುತ 900 ಯೂನಿಟ್ ದಾಸ್ತಾನು ಇದೆ. ಇದು ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ರಕ್ತದಾನ ಮಾಡಿದ ಎಲ್ಲಾ ಸ್ವಯಂಸೇವಕರಿಗೆ ನಾನು ವೈಯಕ್ತಿಕವಾಗಿ ಋಣಿಯಾಗಿದ್ದೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದು ಜೆನಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರೈಲು ದುರಂತ – ಕನ್ನಡಿಗರ ಸುರಕ್ಷತೆ ಮೇಲ್ವಿಚಾರಣೆಗೆ ಸಚಿವ ಸಂತೋಷ್ ಲಾಡ್ ನಿಯೋಜನೆ