ಕಲಬುರಗಿ: ಪೊಲೀಸ್ ನೇಮಕಾತಿಯಲ್ಲಿ ಸ್ಪರ್ಧಿಯೊಬ್ಬರು ಓಡಿದ ಬಳಿಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಇಂದು ಮುಂಜಾನೆ ನಡೆದಿದೆ.
ಮೂಲತಃ ಬೀದರ್ ಜಿಲ್ಲೆಯ ಬಸವಕಲ್ಯಾಣ ನಿವಾಸಿ ವಿಕಾಸ್ ಗಾಯಕವಾಡ (23) ಮೃತ ಯುವಕ. ಇಂದು ಕೆಎಸ್ಆರ್ಪಿ ಬೆಟಾಲಿಯನ್ನಲ್ಲಿ ಪೇದೆಗಳ ನೇಮಕಾತಿ ನಡೆಯುವ ವೇಳೆ ಓಟದ ಮೈದಾನದಲ್ಲೇ ಹೃದಯಾಘಾತವಾಗಿ ಕುಸಿದು ಬಿದ್ದು ವಿಕಾಸ್ ಮೃತಪಟ್ಟಿದ್ದಾರೆ.
ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಗಾಗಿ ವಿಕಾಸ್ ಕಲಬುರಗಿ ನಗರಕ್ಕೆ ಬಂದಿದ್ದರು. ಸ್ಪರ್ಧೆಯಲ್ಲಿ ಎರಡು ಸಾವಿರ ಮೀಟರ್ ಓಟವನ್ನು ಓಡಿ ಪೂರ್ಣಗೊಳಿಸಿದ್ದರು. ಆದರೆ ಓಟದ ನಂತರ ವಿಕಾಸ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲು ವಾಹನದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಗೆ ಈಶಾನ್ಯ ವಲಯ ಐಜಿ ಮುರುಗನ್ ಹಾಗೂ ಎಸ್ಪಿ ಎನ್ ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಪ್ಲೋಮಾ ಓದುತ್ತಿದ್ದ ವಿಕಾಸ್ ಪೊಲೀಸ್ ಪೇದೆಯಾಗುವ ಕನಸು ಕಂಡಿದ್ದರು. ಅದಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದರು. ಇಂದು ರನ್ನಿಂಗ್ ನಲ್ಲಿ ಪಾಸಾಗಿದ್ದರು. ಆದರೆ ನೌಕರಿ ಕನಸು ಇಡೇರುವ ಮುನ್ನವೇ ವಿಕಾಸ್ ಬದುಕು ಕಮರಿಹೋಗಿದೆ. ಇದನ್ನು ಓದಿ: ಬೇಕಿದ್ದ ಅರ್ಹತೆ 168 ಸೆ.ಮೀ ಎತ್ತರ, ಆದ್ರೆ 162 ಸೆ.ಮೀ ಇದ್ರೂ ಸಿಕ್ತು ಕೆಲ್ಸ: ಪೊಲೀಸರಿಗೆ ಶಾಕ್ ಕೊಟ್ಟ ಅಣ್ಣ ತಮ್ಮ