ಗದಗ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಎಕ್ಲಾಸಪೂರ ಬಳಿ ನಡೆದಿದೆ. ರೌದ್ರ ಮಳೆಗೆ ಜಿಲ್ಲೆಯ ಮೊದಲ ಬಲಿ ಇದಾಗಿದೆ. ಎಕ್ಲಾಸಪುರ ಗ್ರಾಮದ ಟಿಪ್ಪು ಸುಲ್ತಾನ್ (26) ಎಂಬ ಯುವಕ ಮಳೆ ಅವಾಂತರಕ್ಕೆ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆಯ ಉಪ್ಪಿನ ಬೆಟಗೇರಿಗೆ ನಿನ್ನೆ ಕನ್ಯೆ ನೋಡಿ ಬರುವುದಾಗಿ ಹೋಗಿದ್ದ. ಮಳೆ ಜೋರಾಗಿ ಬರುತ್ತಿದೆ. ಹೀಗಾಗಿ ರಾತ್ರಿ ಮುಂಡರಗಿಯಲ್ಲಿ ಇದ್ದು, ಬೆಳಗ್ಗೆ ಊರಿಗೆ ಬರುವಂತೆ ಕುಟುಂಬಸ್ಥರು ಹೇಳಿದ್ರು. ಆಗ ಓಕೆ ಅಂದವನು, ಬಳಿಕ ಕುಟುಂಬಸ್ಥರ ಮಾತು ಕೇಳದೆ ರಾತ್ರಿ ಹಳ್ಳದಾಟಲು ಮುಂದಾಗಿದ್ದಾನೆ. ಇದನ್ನೂ ಓದಿ: 1 ವರ್ಷ ಜೈಲು ಶಿಕ್ಷೆ – ನ್ಯಾಯಾಲಯಕ್ಕೆ ಶರಣಾದ ಸಿಧು
ಈ ವೇಳೆ ನೀರಿನ ರಭಸಕ್ಕೆ ಬೈಕ್ ಸಮೇತ ಟಿಪ್ಪು ಸುಲ್ತಾನ್ ಕೊಚ್ಚಿ ಹೋಗಿದ್ದ. ರಾತ್ರಿ ಫೋನ್ ಸ್ವಿಚ್ ಆಫ್ ಆಗಿತ್ತು. ಬೆಳಗ್ಗೆ ಬರಬಹುದು ಎಂದುಕೊಂಡ ಕುಟುಂಬಕ್ಕೆ ಶವ ನೋಡಿ ಶಾಕ್ ಆಗಿದೆ. ಇಂದು ಶವವಾಗಿ ಮುಳ್ಳಿನ ಪೊದೆಯಲ್ಲಿ ಪತ್ತೆಯಾದ ಮೇಲೆ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.