ಕೊಪ್ಪಳ: ಅದು ಹೂ ವ್ಯಾಪಾರ ಮಾಡೋ ದೊಡ್ಡ ಕುಟುಂಬ. ಅದೇ ಹೂ ವ್ಯಾಪಾರ ಮಾಡಿ ಓದಿ ಇದೀಗ ಆ ದೊಡ್ಡ ಕುಟುಂಬದ ಕುಡಿಯೊಂದು PSI ಹುದ್ದೇಗರಿದೆ. ಹೂ ಮಾರುತ್ತಲೇ ಓದಿ ಪಿಎಸ್ಐ ಆದ ಆ ಯುವತಿ ಇದೀಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಒಂದೆಡೆ ಹೂ ಕಟ್ಟಿ ಜೀವನ ಸಾಗಿಸುವ ಕುಟುಂಬ, ಮತ್ತೊಂದ್ಕಡೆ ಸಣ್ಣದಾದ ಹೂವಿನ ಅಂಗಡಿ. ಇದೇ ಹೂವಿನ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವತಿ ಇದೀಗ ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಕಲ್ಯಾಣ ಕರ್ನಾಟಕ ಮೀಸಲಾತಿಯಲ್ಲಿ 17ನೇ ರ್ಯಾಂಕ್ ಪಡೆದ ಕೊಪ್ಪಳ ಜಿಲ್ಲೆಯ ಕುಕನೂರಿನ ಫರಿದಾ ಬೇಗಂ ಈಗ ಪಿಎಸ್ಐ ಹುದ್ದೆ ಅಲಂಕರಿಸಿದ್ದಾರೆ. ಫರಿದಾ ಬೇಗಂರದ್ದು ದೊಡ್ಡ ಕುಟುಂಬ. ತಂದೆ ಮೌಲಾ ಹುಸೇನ್ ಪಟೇಲ್ಗೆ ಒಟ್ಟು 12 ಜನ ಮಕ್ಕಳು ಫರಿದಾ ಬೇಗಂ 9ನೇ ಮಗಳು. 40 ವರ್ಷಗಳಿಂದ ಹೂ ವ್ಯಾಪಾರ ಮಾಡುತ್ತಲೇ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದ ತಂದೆ ಮಗಳ ಕನಸನ್ನು ನನಸು ಮಾಡಿದ್ದಾರೆ.
ತಂದೆ ದಿವಂಗತರಾದ ಬಳಿಕ ಮಕ್ಕಳು ಹೂವಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸಣ್ಣದೊಂದು ಹೂವಿನ ಅಂಗಡಿಯಲ್ಲಿ ಫರೀದಾ ಕೂಡ ವ್ಯಾಪಾರ ಮಾಡಿದ್ದಾರೆ. ಶಾಲಾ ಕಾಲೇಜು ಓದುವ ಸಮಯದಲ್ಲಿ ಹಳ್ಳಿಹಳ್ಳಿಗೆ ಹೋಗಿ ಹೂ ಮಾರಾಟ ಮಾಡಿದ್ರು. ಬಿಬಿಎ ಪದವಿ ಮುಗಿದ ಬಳಿಕ ಸರ್ಕಾರಿ ಹುದ್ದೆ ಪಡೆಯಬೇಕೆಂಬ ಫರೀದಾ ಹಂಬಲ ಇದೀಗ ನೆರವೇರಿದೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್
ಒಟ್ಟಾರೆ ಫರಿದಾ ಛಲಕ್ಕೆ ಯಾವುದೇ ಬಡತನ ಅಡ್ಡಿ ಬಂದಿಲ್ಲ. ದಾರ ಹಿಡಿದು ಹೂ ಕಟ್ಟೋ ಕೈಗೆ ಇನ್ನು ಮುಂದೆ ಲಾಠಿ ಬರಲಿದೆ. ಮನಸ್ಸಿದ್ರೆ ಮಾರ್ಗ ಅನ್ನೋದಕ್ಕೆ ಫರಿದಾ ಬೇಗಂ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ.