ಮೈಸೂರು: ದಸರಾ ಹಬ್ಬದ ದಿನವೇ ಯದುವಂಶದ ಇಬ್ಬರು ನಿಧನರಾಗಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಫೇಸ್ಬುಕ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಶುಕ್ರವಾರ ಚಾಮರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿ ದೇವಿ ಮತ್ತು ರಾಜವಂಶಸ್ಥೆ ಪ್ರಮೋದಾ ದೇವಿ ಅವರು ತಾಯಿ ಪುಟ್ಟರತ್ನಮ್ಮಣ್ಣಿ ನಿಧನ ಹೊಂದಿದ್ದರು. ಹೀಗಾಗಿ ಯದುವೀರ್ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿ ಸಂದೇಶವನ್ನು ಹಾಕಿದ್ದಾರೆ. ಮೊದಲಿಗೆ ಅಜ್ಜಿ ಬಗ್ಗೆ ಮತ್ತು ನಂತರ ತಮ್ಮ ಅತ್ತೆಯ ಬಗ್ಗೆ ಬರೆದು ಫೋಟೋ ಹಾಕಿ ವಿಷಾದಿಸಿದ್ದಾರೆ.
ಯದುವೀರ್ ಫೋಸ್ಟ್
ಸ್ನೇಹಿತರೆ, “ನನ್ನ ಅಜ್ಜಿಯವರಾದ ಪುಟ್ಟರತ್ನಮ್ಮಣ್ಣಿ ಅವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಅವರು ಶಾಂತ ಸ್ವಭಾವದವರಾಗಿದ್ದು, ನನ್ನ ಜವಾಬ್ದಾರಿಯನ್ನು ವಹಿಸಿದಾಗ ತುಂಬು ಹೃದಯದಿಂದ ಸ್ವಾಗತಿಸಿದ್ದರು. ಅವರು ನನ್ನ ತಾಯಿ ಮಹಾಸನ್ನಿಧಾನ ಸವಾರಿ ರಾಜಮಾತೆ ಪ್ರಮೋದಾ ದೇವಿ ಒಡೆಯರವರಿಗೆ ಬಹಳ ಹತ್ತಿರವಾಗಿದ್ದರು ಹಾಗೂ ಅವರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದರು. ಅವರು ನಮ್ಮಿಂದ ದೂರವಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಮಹಾರಾಜಕುಮಾರಿ ವಿಶಾಲಾಕ್ಷಿ ದೇವಿಯವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ” ಎಂದು ಅಜ್ಜಿಯ ಬಗ್ಗೆ ಬರದಿದ್ದಾರೆ.
“ವಿಶಾಲಾಕ್ಷಿ ದೇವಿ ಅವರು ಶ್ರೀಮನ್ ಮಹಾರಾಜ ಜಯಚಾಮರಾಜ ಒಡೆಯರ್ ಮತ್ತು ತ್ರಿಪುರಸುಂದರಮ್ಮಣ್ಣಿ ಅವರಿಗೆ 1962 ರಲ್ಲಿ ಜನಿಸಿದ್ದರು. ಅವರ ತಂದೆಯ ಹಾಗೆಯೇ ಮಹಾರಾಜಕುಮಾರಿ ಅವರು ಕೂಡ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದರು ಮತ್ತು ಈ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾದದ್ದು. ಅವರು ಹಲವಾರು ಚಿರತೆಗಳು ಹಾಗು ಆನೆಗಳನ್ನು ತಮ್ಮ ಅರಣ್ಯದ ವಾಸಸ್ಥಾನಕ್ಕೆ ಮರಳಲು ಸಹಾಯ ಮಾಡಿದ್ದರು. ಅವರೊಂದಿಗೆ ಬಂಡೀಪುರದಲ್ಲಿ ಕಳೆದ ಕ್ಷಣಗಳು ಅವರೊಂದಿಗಿನ ನನ್ನ ಅತ್ಯುತ್ತಮ ನೆನಪುಗಳಾಗಿವೆ. ಅವರು ನಮ್ಮಿಂದ ದೂರವಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತನ್ನ ಅತ್ತೆಯ ಬಗ್ಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv