ಶಿವಮೊಗ್ಗ: ಗಂಡ ಮತ್ತು ಆತನ ಮನೆಯವರ ಟಾರ್ಚರ್ನಿಂದಾಗಿ ರೊಚ್ಚಿಗೆದ್ದ ಮಹಿಳೆಯೊಬ್ಬರು ದೇವಾಲಯದ ಗರ್ಭಗುಡಿಗೆ ನುಗ್ಗಿ ದೇವಿಯ ವಿಗ್ರಹದ ಮೇಲೆಯೇ ದಾಳಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಇಲ್ಲಿನ ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬಾ ದೇವಿಯ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಇಂದು ಎಂದಿನಂತೆ ಪೂಜೆ- ಪ್ರಸಾದ ವಿನಿಯೋಗ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಗರ್ಭಗುಡಿಗೆ ನುಗ್ಗಿದ್ದಾರೆ. ಬಳಿಕ ದೇವಿಯ ತ್ರಿಶೂಲ ಕೈಗೆ ತೆಗೆದುಕೊಂಡು ದೇವಿಗೇ ಹೊಡೆದಿದ್ದಾರೆ. ಇವರನ್ನು ಹಿಡಿಯಲು ಹೋದ ಅರ್ಚಕರು, ಭಕ್ತರಿಗೆ ತ್ರಿಶೂಲ ತೋರಿಸಿ ಬೆದರಿಸಿದ್ದಾರೆ.
ನಂಬಿಕೊಂಡಿದ್ದೆ, ನನಗೇ ನ್ಯಾಯ ಕೊಡದೆ ಮೋಸ ಮಾಡಿದ್ದೀಯ ಎಂದು ಕೂಗಾಡಿದ್ದಾರೆ. ಮಹಿಳೆಯ ಈ ಆರ್ಭಟಕ್ಕೆ ದೇವಿ ವಿಗ್ರಹ ಭಗ್ನಗೊಂಡಿದೆ. ನಂತರ ಇನ್ನಷ್ಟು ಭಕ್ತರು ಸೇರಿ ಈ ಮಹಿಳೆಯನ್ನು ಹಿಡಿದು, ಕೋಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೂಲತಃ ಹೊಳೆನರಸೀಪುರದವರಾದ ಈ ಮಹಿಳೆ ಹೆಸರು ಶಾಂತಲಾ ಎನ್ನಲಾಗಿದ್ದು, ಕೌಟುಂಬಿಕ ಕಾರಣಗಳಿಂದ ನೊಂದಿದ್ದರು ಎಂಬುವುದಾಗಿ ತಿಳಿದುಬಂದಿದೆ.