-70 ಲಕ್ಷ ರೂ. ಹಣ ದೋಚಿದ ಕೇಡಿ ಲೇಡಿ
-ಉದ್ಯೋಗದ ಕನಸು ಕಂಡವರಿಗೆ ಟೋಪಿ
ಹೈದರಾಬಾದ್: ವಿಲಾಸಿ ಜೀವನಕ್ಕೆ ಮಾರು ಹೋದ ಮಹಿಳೆ ನಿರುದ್ಯೋಗ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿ ಲಕ್ಷ ಲಕ್ಷ ರೂ. ಹಣ ಪಡೆದು ಮೋಸ ಮಾಡಿರುವ ಘಟನೆ ಆಂಧ್ರಪ್ರದೇಶ ಗುಂಟೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶ ಗುಂಟೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವ್ಯವಸ್ಥಿತವಾಗಿ ಮೋಸ ಮಾಡುವ ಕಾರ್ಯ ಮಾಡುತ್ತಿದ್ದ ಮಹಿಳೆಯ ಕೃತ್ಯ ಬೆಳಕಿಗೆ ಬಂದಿದ್ದು, ಇದುವರೆಗೂ ಸುಮಾರು 70 ಲಕ್ಷ ರೂ. ಹೆಚ್ಚು ಹಣವನ್ನು ಪಡೆದು ಮೋಸ ಮಾಡಿದ್ದಾಳೆ.
ಮಾಮಿಳ್ಳಪಲ್ಲಿ ದೀಪ್ತಿ ಎಂಬ ಮಹಿಳೆ ಈ ಮೋಸದ ಜಾಲವನ್ನು ನಡೆಸಿದ್ದು, ಸದ್ಯ ಈಕೆಯ ವಿರುದ್ಧ ಮೋಸ ಹೋದ ಯುವಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ರಾಜ್ಯ ಸಚಿವಾಲಯದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಗುಂಟೂರು ಜಿಲ್ಲೆಯ ಯುವಕನೊಬ್ಬನಿಂದ ದೀಪ್ತಿ 3 ಲಕ್ಷ ರೂ. ಹಣ ಕೇಳಿದ್ದಳು. ಸರ್ಕಾರಿ ಉದ್ಯೋಗದ ಆಸೆ ಬಿದ್ದ ಆತ ಸಾಲ ಮಾಡಿ 1.5 ಲಕ್ಷ ರೂ.ಗಳನ್ನು ನೀಡಿದ್ದ. ಮತ್ತೊಬ್ಬ ವ್ಯಕ್ತಿಯಿಂದ 15 ಲಕ್ಷ ರೂ. ಬೇಡಿಕೆ ಇಟ್ಟು 5 ರೂ. ಲಕ್ಷ ರೂ. ಗಳನ್ನು ಮುಂಗಡವಾಗಿ ಪಡೆದಿದ್ದಳು. ಅಲ್ಲದೇ ಕಳೆದ ವರ್ಷದಿಂದಲೂ ಹಲವು ವ್ಯಕ್ತಿಗಳಿಂದ ಹಣವನ್ನು ಪಡೆದಿದ್ದರು. ಮಹಿಳೆಗೆ ಹಣ ನೀಡಿ ಮೋಸ ಹೋಗಿದ್ದ ಗುಂಟೂರು ಜಿಲ್ಲೆಯ ವಂಶಿಕೃಷ್ಣ ಎಂಬಾತ ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ತಾನು ಸರ್ಕಾರಿ ಕಾರ್ಯದರ್ಶಿಯ ಪಿಎ ಎಂದು ಹೇಳಿ ಕೇವಲ ಉದ್ಯೋಗ ಮಾತ್ರವಲ್ಲದೇ ಭೂ ವಿವಾದ, ನಿವಾಸದ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಅನಂತಪುರಂ, ಕಡಪ ಹಾಗೂ ನೆಲ್ಲೂರು ಜಿಲ್ಲೆಯ ವ್ಯಕ್ತಿಗಳಿಂದ ಕ್ರಮವಾಗಿ 12, 10, 12 ಲಕ್ಷ ರೂ.ಗಳನ್ನು ಮಹಿಳೆ ಪಡೆದು ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಸದ್ಯ ಪ್ರಕರಣ ಬೆಳಕಿಗೆ ಬರುತ್ತಿದಂತೆ ಮಹಿಳೆ ನಾಪತ್ತೆಯಾಗಿದ್ದು, ಮೋಸ ಹೋದ ಜನರು ಆಕೆಯನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.