ನವದೆಹಲಿ: ರಾಷ್ಟ್ರಮಟ್ಟದಲ್ಲಿ ಮದ್ಯಪಾನ ತಡೆ ನೀತಿಯನ್ನು (national liquor policy) ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ವಿಚಾರಣೆಗೆ ನಿರಾಕರಿಸಿದೆ.
ವಿನಿಯೋಗ್ ಪರಿವಾರ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈ ಪ್ರಕರಣ ಆದಾಯದ ಅಂಶದಿಂದ ಕೂಡಿದೆ. ಕೆಲವು ಸಂದರ್ಭಗಳಲ್ಲಿ ನಾವು ಸೂಚನೆಗಳನ್ನು ನೀಡಿದರೆ ಅದು ರಾಜ್ಯ ಸರ್ಕಾರದ ಆದಾಯವನ್ನು ನಿರ್ಬಂಧಿಸಿದಂತಾಗಲಿದೆ. ಈ ಆದಾಯವನ್ನು ಸರ್ಕಾರಗಳು ಸಾಮಾಜಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಮನವಿಯು ಸರ್ಕಾರ ಹೊಸ ನೀತಿ ಹೊಂದಲು ನಿರ್ದೇಶಿಸುವಂತಿದೆ. ನೀತಿ ರೂಪಿಸಲು ಸೂಚಿಸುವುದು ನಮ್ಮ ವ್ಯಾಪ್ತಿ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (U.U.Lalit) ಹೇಳಿದರು. ಇದನ್ನೂ ಓದಿ: ಕೊಹಿನೂರ್ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್ನಿಂದ ವಾಪಸ್ ತರಿಸಿ – ರಾಷ್ಟ್ರಪತಿಗೆ ಮನವಿ
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಈ ಸಮಸ್ಯೆಯು ಭಾರತದ ಸಂವಿಧಾನದಲ್ಲಿ ಸಮಕಾಲೀನ ಪಟ್ಟಿಯಲ್ಲಿದೆ. ಆದರೂ ಕೇಂದ್ರ ಸರ್ಕಾರವೂ ಸಮಸ್ಯೆಯನ್ನು ಸಂಪೂರ್ಣವಾಗಿ ಕೈತೊಳೆದುಕೊಂಡಿದೆ. ಇದರಿಂದ ಆರೋಗ್ಯ ಸಂಬಂಧಿ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಕುಟುಂಬಗಳಿಗೆ ಇದು ಮಾರಕವೂ ಆಗಿದೆ ಎಂದರು.
ಅದೇನೆ ಇದ್ದರೂ ನಾವು ಈ ಬಗ್ಗೆ ನೀತಿಗಳನ್ನು ರೂಪಿಸಲು ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ಅರ್ಜಿಯ ವಿಚಾರಣೆ ಬೇರೆಯ ಸ್ವರೂಪ ಪಡೆಯಲಿದೆ. ನೀವೂ ಬೇಕಾದ್ದನ್ನು ಮಾಡಬಹುದು. ನಾವು ಈ ಅರ್ಜಿಯನ್ನು ಮುಟ್ಟುವುದಿಲ್ಲ ಎಂದು ಅರ್ಜಿ ವಜಾ ಮಾಡುವ ಮುನ್ನ ಪೀಠ ಸ್ಪಷ್ಟಪಡಿಸಿತು. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ