ರಾಮನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಸಾವನ್ನಪ್ಪಿದ್ದು, ಮೃತ ಆನೆ ಬಳಿ ನಿಂತು ಮರಿ ಆನೆ ಮೂಕರೋಧನೆ ವ್ಯಕ್ತಪಡಿಸಿರುವ ಘಟನೆ ರಾಮನಗರ (Ramanagar) ಜಿಲ್ಲೆಯ ಕಾವೇರಿ ವನ್ಯಜೀವಿ ವಲಯದ ಮುಗ್ಗೂರು (Mugguru) ಅರಣ್ಯ ಸಮೀಪ ನಡೆದಿದೆ.
ಕನಕಪುರ ತಾಲೂಕಿನ ಮಡಿವಾಳ ಸಮೀಪ ಇರುವ ಮುಗ್ಗೂರು ಅರಣ್ಯ ಪ್ರದೇಶದಲ್ಲಿ ಬಹುಅಂಗಾಂಗ ವೈಫಲ್ಯದಿಂದ 35 ವರ್ಷದ ಹೆಣ್ಣಾನೆ ಸಾವನ್ನಪ್ಪಿದೆ. ತಾಯಿ ಸಾವನ್ನಪ್ಪಿರೋದನ್ನ ಅರಿಯದೇ ಅದರ ಮೃತದೇಹದ ಬಳಿ ನಿಂತು ಮರಿ ಆನೆಯೊಂದು ರೋಧನೆ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬೆಂಗಳೂರು| ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಬ್ಲಾಸ್ಟ್ ಆಗಿ ವ್ಯಕ್ತಿ ಸಾವು
ಸದ್ಯ ಮರಿಯಾನೆಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮುಗಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಸಂತೈಸಿ ಕಾಡಿಗೆ ಬಿಟ್ಟಿದ್ದಾರೆ.

