ಬೆಂಗಳೂರು: ಬರದ ವಿಚಾರದಲ್ಲಿ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ರಾಜಕೀಯ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು (Pralhad Joshi) ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಬರ ಅಧ್ಯಯನ ತಂಡ ಕಳಿಸುವಂತೆ ಪ್ರಧಾನಿ ಮೋದಿ (Narendra Modi) ಅವರಿಗೆ ಸಿಎಂ ಪತ್ರ ಬರೆದ ವಿಚಾರಕ್ಕೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ರಾಜ್ಯ ಸರ್ಕಾರ ಮಳೆ ಎಷ್ಟು ಆಗಿದೆ. ಎಷ್ಟು ಆಗಬೇಕು, ಬಿತ್ತನೆ ಎಷ್ಟು ಆಗಿದೆ ಎಂದು ಕೇಂದ್ರಕ್ಕೆ ಮೊದಲು ಮಾಹಿತಿ ಕೊಡಲಿ. 12 ವರ್ಷಗಳಿಂದ ಕಾಂಗ್ರೆಸ್ ನೀತಿ ಮಳೆ ಜಾಸ್ತಿ ಆದ್ರೆ, ಕಡಿಮೆ ಆದ್ರೆ ಮೋದಿ ಕಾರಣ. ಜನಸಂಖ್ಯೆ ಜಾಸ್ತಿ ಆದ್ರೂ, ಕಡಿಮೆ ಆದ್ರೂ ಮೋದಿ ಕಾರಣ. ಈ ರೀತಿ ಮಾತಾಡೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಈ ಧೋರಣೆ ಕೈ ಬಿಡಬೇಕು. ಮೋದಿಗೆ ಕರ್ನಾಟಕದ ಜನ ಮತ ಹಾಕಿದ್ದಾರೆ. ಇಲ್ಲಿನ ಜನ ನಮ್ಮವರೇ. ಇದರಲ್ಲಿ ಬೇಧ ಮಾಡಲ್ಲ. ರಾಜಕೀಯ ಮಾಡೋದು ಬಿಟ್ಟು ಅಂಕಿಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಸ್ತೆ ಕಾಮಗಾರಿ ವೇಳೆ ಟೆಂಡರ್ ಉಲ್ಲಂಘನೆ; ಕರ್ತವ್ಯ ಲೋಪ – ಇಬ್ಬರು ಅಧಿಕಾರಿಗಳ ಅಮಾನತು

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ, ಕ್ಯಾಬಿನೆಟ್ ಮಾಡೋಕೆ ರಾಹುಲ್ ಗಾಂಧಿ ಇಷ್ಟು ದಿನ ನಾಪತ್ತೆ ಆಗಿದ್ರು. ಅವರು ಎಲ್ಲಿಗೆ ಹೋಗಿದ್ರು ಅಂತ ಯಾರಿಗಾದರು ಗೊತ್ತಾ? ಯಾವ ದೇಶದಲ್ಲಿ ಇದ್ದರು ಎಂದು ನಮಗೂ ಗೊತ್ತಿಲ್ಲ. ರಾಹುಲ್ ಗಾಂಧಿ ಕಳ್ಳತನದಲ್ಲಿ ಯಾಕೆ ವಿದೇಶಕ್ಕೆ ಹೋಗಬೇಕು ಅಂತ ಪ್ರಶ್ನಿಸಿದರು.
ದಾಖಲಾತಿ ತೆಗೆಯೋದು IB ಕೆಲಸ. ಅವರು ಮಾಡ್ತಾರಾ, ಇಲ್ಲವಾ ನನಗೆ ಗೊತ್ತಿಲ್ಲ. ನಾವು ಅದನ್ನ ಮಾಡಲ್ಲ. ನಾನು ಇಂತಹ ದೇಶಕ್ಕೆ ಹೋಗಿದ್ದೇನೆ ಅಂತ ಹೇಳೋದು ಅವರ ಕೆಲಸ ಅಲ್ಲ. ಪ್ರಧಾನಿ ಕೇಂದ್ರದ ಮಂತ್ರಿಗಳು ವಿದೇಶಕ್ಕೆ ಹೋದಾಗ ಎಲ್ಲಿಗೆ ಹೋಗಿದ್ವಿ ಅಂತ ಹೇಳ್ತಾರೆ. ನೀವು ಯಾಕೆ ಹೇಳಲ್ಲ? 25 ದಿನಗಳಿಂದ ರಾಹುಲ್ ಗಾಂಧಿ ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲ. ದೇಶದ ಜನರಿಂದ ಏನು ಮುಚ್ಚಿಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಅನೇಕ ಕಾರ್ಯಕ್ರಮ ರದ್ದು ಮಾಡಿ ಹೋಗಿದ್ದಾರೆ. ಎಲ್ಲಿಗೆ ಹೋಗಿದ್ದಾರೆ? ವಿರೋಧ ಪಕ್ಷದ ನಾಯಕ, ಎಂಪಿ, ಪ್ರತಿಷ್ಠಿತ ಗಾಂಧಿ ಕುಟುಂಬದವರು ಎಲ್ಲಿಗೆ ಹೋಗಿದ್ದೇವೆ ಅಂತ ಹೇಳೋ ಜವಾಬ್ದಾರಿ ಇಲ್ಲವಾ? ಯಾಕೆ ಹೇಳ್ತಿಲ್ಲ ಅಂತ ಅವರೇ ಹೇಳಬೇಕು ಎಂದು ಆಗ್ರಹಿಸಿದರು.
ಬಿಡದಿ ಟೌನ್ಶಿಪ್ಗೆ (Bidadi Township) ಸಿಎಂ ಡಿ.ಕೆ ಶಿವಕುಮಾರ್ ಇಷ್ಟು ಆತುರವಾಗಿ ಮಾಡ್ತಿರೋದು ನೋಡಿದ್ರೆ ಇದರ ಹಿಂದೆ ಏನೋ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 2019ರಿಂದ 2023ರವರೆಗೆ ಬಿಜೆಪಿ ಸರ್ಕಾರ ಇತ್ತು. ಆಗ ನಾವು ಮಾಡಲಿಲ್ಲ. ದೇವೇಗೌಡರು ಸಿಎಂ ಡಿ.ಕೆ ಶಿವಕುಮಾರ್ ಮೇಲೆ ದೊಡ್ಡ ಆರೋಪ ಮಾಡಿದ್ರು. ಅದಕ್ಕೆ ಅವರು ಉತ್ತರ ಕೊಟ್ಟಿಲ್ಲ. ಯಾಕೆ ಉತ್ತರ ಕೊಟ್ಟಿಲ್ಲ. ಸಿದ್ದರಾಮಯ್ಯ ಯಾಕೆ ಇದನ್ನ ಮಾಡಿಲ್ಲ. ಇದನ್ನ ಇಷ್ಟು ಆತುರವಾಗಿ ಮಾಡ್ತಿರೋದು ನೋಡಿದ್ರೆ ಇದರ ಹಿಂದೆ ಏನೋ ಇದೆ ಅಂತ ಆರೋಪ ಮಾಡಿದರು.
ರೈತರ ಜೊತೆ ಯಾಕೆ ಸಿಎಂ ಮಾತಾಡ್ತಾ ಇಲ್ಲ. ಸಿಎಂ ಅವರು ದಾದಾಗಿರಿ ಮಾಡಿ ಕೆಲಸ ಮಾಡೋದಾ? ರಾಹುಲ್ ಗಾಂಧಿ ಬೇರೆ ರಾಜ್ಯಕ್ಕೆ ಹೋಗಿ ರೈತರ ಜೊತೆ ಇದ್ದೇನೆ ಅಂತಾರೆ. ಆದ್ರೆ ಇಲ್ಲಿ ಏನ್ ಮಾಡ್ತಾ ಇದ್ದಾರೆ. ದೇವೇಗೌಡರ ಆರೋಪಕ್ಕೆ ಉತ್ತರ ನೀಡಲಿ ಮೊದಲು ಅಂತ ಆಗ್ರಹ ಮಾಡಿದರು.
ಸಿದ್ದರಾಮಯ್ಯ 3 ವರ್ಷ ಯಾಕೆ ಮಾಡಲಿಲ್ಲ. ಈಗ ಯಾಕೆ ಇಷ್ಟು ಮುತುವರ್ಜಿ ತೋರಿಸ್ತಾ ಇದ್ದಾರೆ. ಬಿಡದಿ ಟೌನ್ ಶಿಪ್ ಮಾಡಿದ್ರೆ ಮಾತ್ರ ಬೆಂಗಳೂರು ಅಭಿವೃದ್ಧಿ ಆಗೊಲ್ಲ. ಅಥವಾ ಒತ್ತಾಯ ಪೂರ್ವಕವಾಗಿ ಜನರ ಭೂಮಿಯನ್ನು ಕಸಿದು ಮಾಡೋದು ಅಲ್ಲ. ಜನರ ಮನವೊಲಿಕೆ ಮಾಡಬೇಕು. ಅದು ಬಿಟ್ಟು ನನ್ನ ಕಡೆ ಪೊಲೀಸ್ ಇದೆ. ನೀವು ಬೇಕಾದ್ದು ಮಾಡಿ ಅನ್ನೋದಾ? ಇದು ಪ್ರಜಾಪ್ರಭುತ್ವನಾ? ಅಂತ ಕಿಡಿಕಾರಿದರು. ರೈತರು ತಿರುಗಿ ಬಿದ್ದ ಕೂಡಲೇ ಈಗ ಒತ್ತಾಯ ಇಲ್ಲ ಅಂತಿದ್ದಾರೆ. ಯಾಕೆ ಜನರ ಜೊತೆ ಮಾತಾಡಿಲ್ಲ. ನೀವು ಮುಖ್ಯಮಂತ್ರಿ ಆದ್ರೆ ಸರ್ವಾಧಿಕಾರಿ ಅಲ್ಲ. ಪ್ರಜಾಪ್ರಭುತ್ವದಲ್ಲಿ ಮಾತುಕತೆ ನಡೆಯಬೇಕು. ಡಿ.ಕೆ ಶಿವಕುಮಾರ್ ರಾಜ್ಯದ ಸಿಎಂ. ಈ ರಾಜ್ಯದ ಮಹಾರಾಜರು ಅಲ್ಲ. ಇದನ್ನ ಅರ್ಥ ಮಾಡಿಕೊಂಡು ನಡೆನುಡಿ ಸರಿ ಮಾಡಿಕೊಳ್ಳಲಿ. ಭ್ರಷ್ಟಾಚಾರದ ಪರಮ ಆರೋಪಗಳು ಬರುತ್ತಿವೆ. ಇದರ ಬಗ್ಗೆ ಸ್ಪಷ್ಟನೆ ನೀಡಲಿ ಅಂತ ಆಗ್ರಹಿಸಿದರು.

ಡಿ.ಕೆ ಶಿವಕುಮಾರ್ ಏನೋ ತಪ್ಪು ಮಾಡಿದ್ದಾರೆ. ಹೀಗಾಗಿ ಜೈಲಿನ ಬಗ್ಗೆ ಮಾತಾಡ್ತಾ ಇದ್ದಾರೆ. ಅವರನ್ನು ಯಾರು ಜೈಲಿಗೆ ಕಳಿಸೋ ವಿಚಾರ ಇಲ್ಲ. ಅವರು ಮಾಡಿದ ಭ್ರಷ್ಟಾಚಾರ, ತಪ್ಪಿನಿಂದ ಅವರು ಜೈಲಿಗೆ ಹೋದ್ರೆ ಯಾರು ಏನು ಮಾಡೋಕೆ ಆಗಲ್ಲ. ನಾವು ಅವರನ್ನು ಜೈಲಿಗೆ ಕಳಿಸೋ ಪ್ರಯತ್ನ ಮಾಡ್ತಾ ಇಲ್ಲ. ಇದೆಲ್ಲಾ ಅನುಕಂಪಕ್ಕೆ ಮಾಡ್ತಾ ಇರೋದು. ಯಾರೋ ವ್ಯಕ್ತಿ ತಪ್ಪು ಮಾಡಿದ್ರೆ ಜೈಲಿಗೆ ಹೋಗ್ತಾರೆ. ಹಾಗಾದರೆ ಏನಾದ್ರು ತಪ್ಪು ಮಾಡಿದ್ದೀರಾ? ನಿಮಗೆ ಭಯ ಇದೆ. ಈ ಭಯದಿಂದ ನೀವು ಹೊರಗೆ ಬನ್ನಿ ಅಂತ ಸಲಹೆ ಕೊಟ್ಟರು.
ರಾಜ್ಯದಲ್ಲಿ ಜನರ ಹಿತ ಇಟ್ಟುಕೊಂಡು ಅಧಿಕಾರ ಮಾಡಿ. ರೈತರ ಜೊತೆ ಮಾತುಕತೆ ಮಾಡೊಲ್ಲ. ಅವರ ಮೇಲೆ ಕೇಸ್ ಹಾಕ್ತೀರಾ. ಸಿದ್ದರಾಮಯ್ಯ ಮಾಡಿದ್ದು ನೀವು ಯಾಕೆ ಮಾಡ್ತಾ ಇದ್ದೀರಾ. ಇದರ ಅರ್ಥ ಏನೋ ಡೀಲ್ ಆಗಿದೆ ಅಂತ ಅಲ್ಲವಾ. ಇದರ ಬಗ್ಗೆ ಯಾಕೆ ಉತ್ತರ ಕೊಡ್ತಿಲ್ಲ ಅಂತ ಕಿಡಿಕಾರಿದರು. ಸಿಎಂಗೆ ಪ್ರಶ್ನೆ ಕೇಳಿದ್ರೆ ರೋಷ ಉಕ್ಕಿ ಬರುತ್ತದೆ. ಮನುಷ್ಯ ತಪ್ಪು ಮಾಡಿದಾಗ ಹತಾಶೆಯಾಗಿ ಹೀಗೆ ಕೂಗಾಡ್ತಾರೆ. ಸಿಎಂ ಕೂಗಾಡೋದು ನೋಡಿದ್ರೆ ಏನೋ ತಪ್ಪು ಮಾಡಿದ್ದಾರೆ. ಅದಕ್ಕೆ ಜೈಲಿನ ಬಗ್ಗೆ ಮಾತಾಡ್ತಾ ಇದ್ದಾರೆ. ನಾವು ಯಾಕೆ ಜೈಲಿಗೆ ಹಾಕೋಣ. ನೀವು ಜನರನ್ನ ಜೈಲಿಗೆ ಹಾಕಿದ್ದು ಅಂತ ಕಿಡಿಕಾರಿದರು. ಇದನ್ನೂ ಓದಿ: ಬರೀ SIR ಬಗ್ಗೆ ಮಾತನಾಡೋಕೆ ಬಂದಿದ್ದೀರಾ? – ಆರ್.ಅಶೋಕ್ ಕಾರು ಅಡ್ಡಗಟ್ಟಿ ರೈತರ ಆಕ್ರೋಶ
