ಉಡುಪಿ: ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲು ನಾನು ಯಾರು ಎಂದು ಕಾಂಗ್ರೆಸ್ಸಿನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೇಸರದ ಹೇಳಿಕೆಯನ್ನು ನೀಡಿದ್ದಾರೆ.
ಪ್ರಮೋದ್ ಮಧ್ವರಾಜ್ ರವರು ಶುಕ್ರವಾರ ಮಲ್ಪೆಯ ಕೊಳ ನಗರಸಭೆ ವಾರ್ಡಿನ ಮತಗಟ್ಟೆಯಲ್ಲಿ ತಮ್ಮ ತಾಯಿಯೊಂದಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಪಪ್ರಚಾರ ಮಾಡಿ ಗೆದ್ದಿದೆ. ಶಾಸಕ ರಘುಪತಿ ಭಟ್ ಬಗ್ಗೆ ಜನ ಭ್ರಮನಿರಸಗೊಂಡಿದ್ದಾರೆ. ಸ್ಥಳೀಯ ಚುನಾವಣೆಯನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡಿಲ್ಲ. ನಾವು ಸೇವಕರು ಹೀಗಾಗಿ ಸವಾಲು, ಪ್ರತಿಷ್ಠೆ ಅಗತ್ಯವಿಲ್ಲ. ಮತದಾರರು ತಮಗೆ ಯಾರು ಬೇಕೋ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ನನ್ನನ್ನು ತಿರಸ್ಕಾರ ಮಾಡಿರುವುದಕ್ಕೆ ನನಗೆ ಕಿಂಚಿತ್ತು ನೋವಿಲ್ಲ. ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ನನ್ನ ಒಬ್ಬನ ವೋಟು ಆಗಿದ್ದರೆ, ಆಗ ಸವಾಲು ಹಾಕಬಹುದಾಗಿತ್ತು. ಆದರೆ ಲಕ್ಷಾಂತರ ಮಂದಿ ಜನರ ಪರವಾಗಿ ನಾನು ಸವಾಲು ಹಾಕಲು ಆಗುವುದಿಲ್ಲ. ಹಾಗೇನಾದರೂ ಸವಾಲು ಹಾಕಿದರೆ, ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ನಾಯಕನಿಂದ ಎಲ್ಲರನ್ನೂ ಗೆಲ್ಲಿಸಬಲ್ಲೇ ಎಂಬ ಅಹಂ ಒಳ್ಳೆಯದಲ್ಲ ಎಂದು ಹೇಳಿದರು.
ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಜನರ ತೀರ್ಮಾನವೇ ಅಂತಿಮವಾಗಿರುತ್ತದೆ. ಜನ ಚುವಾವಣೆಯಲ್ಲಿ ಅಭಿವೃದ್ಧಿ ಮಾತ್ರ ನೋಡುವುದಿಲ್ಲ. ಜನರ ಆಲೋಚನೆಗಳೇ ಬೇರೆಯಾಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv