ಕೋಲ್ಕತ್ತಾ: ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿ ಜವಹಾರ್ ಲಾಲ್ ನೆಹರು ಫೋಟೋವನ್ನು ಬಿಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ನೆಹರೂ ಭಾವಚಿತ್ರವನ್ನು ಕೈಬಿಟ್ಟಿದೆ.
ಸಿಎಂ ಮಮತಾ ಬ್ಯಾನರ್ಜಿ ಅವರು ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವು ನಾಯಕರ ಭಾವಚಿತ್ರ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರೊಫೈಲ್ ಫೋಟೋವನ್ನಾಗಿ ಹಾಕಿದ್ದಾರೆ.
ಕರ್ನಾಟಕ ಸರ್ಕಾರ ಸ್ವಾತಂತ್ರ್ಯ ದಿನದ ಜಾಹೀರಾತು ಪ್ರಕಟವಾಗುವ ಮೊದಲೇ ಆಗಸ್ಟ್ 14 ರಂದು ಟಿಎಂಸಿ ನಾಯಕರು ಹೊಸ ಪ್ರೊಫೈಲ್ ಫೋಟೋವನ್ನು ಬದಲಾಯಿಸಿಕೊಂಡಿದ್ದಾರೆ.
History lesson for @MamataOfficial @AITCofficial from a kid ! Because they purposefully ommitted the first prime minister #JawaharlalNehru from their independence day DP to please their political masters ! https://t.co/SjLQzMj7Al
— West Bengal Congress (@INCWestBengal) August 14, 2022
ಈ ಚಿತ್ರದಲ್ಲಿ ನೆಹರು ಫೋಟೋವನ್ನು ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಮಮತಾ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪುತ್ರಿ ಬರೆದಿರುವ ಸ್ವಾತಂತ್ರ್ಯ ದಿನದ ಚಿತ್ರದಲ್ಲಿ ನೆಹರು ಫೋಟೋ ಇರುವುದನ್ನು ಟ್ವಿಟ್ ಮಾಡಿ, ‘ಪುಟ್ಟ ಬಾಲಕಿಯಿ೦ದ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸಿಗೆ ಇತಿಹಾಸ ಪಾಠ’ ಎಂದು ಬರೆದು ತಿರುಗೇಟು ನೀಡಿದೆ.
ಸ್ವಾತಂತ್ರ್ಯ ಸಿಕ್ಕಿ 75 ವರ್ಷದ ಅಮೃತಮಹೋತ್ಸವ ಆಚರಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋದಲ್ಲಿ ರಾಷ್ಟ್ರಧ್ವಜವನ್ನು ಹಾಕಬೇಕೆಂದು ಜನತೆಗೆ ಕರೆ ಕೊಟ್ಟಿದ್ದರು. ಈ ಕರೆಯ ಬೆನ್ನಲ್ಲೇ ಕಾಂಗ್ರೆಸ್ ಜವಹಾರ್ ಲಾಲ್ ನೆಹರು ರಾಷ್ಟ್ರಧ್ವಜ ಹಿಡಿದಿರುವ ಫೋಟೋವನ್ನು ಬಿಡುಗಡೆ ಮಾಡಿತ್ತು ಅಲ್ಲದೇ ಕಾಂಗ್ರೆಸ್ ನಾಯಕರು ಈ ಫೋಟೋವನ್ನು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಡಿಸ್ಪ್ಲೇ ಫೋಟೋವನ್ನಾಗಿ ಹಾಕಿದ್ದರು.