– ವಿಧಾನಸೌಧದಿಂದ ಮತ್ತೆ ರೆಸಾರ್ಟಿಗೆ ಶಾಸಕರು ಶಿಫ್ಟ್
ಬೆಂಗಳೂರು: ಸದನದಲ್ಲಿ ವಿನಾಕಾರಣ ಸದಸ್ಯರಿಗೆ ಚರ್ಚೆ ನಡೆಸಲು ಹೆಚ್ಚು ಸಮಯ ಕೊಟ್ಟು ಕಾಲಹರಣ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.
ವಿಧಾನಸಭಾ ಕಲಾಪ ಮುಂದೂಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ವೈ, ಸ್ಪೀಕರ್ ರಮೇಶ್ ಕುಮಾರ್ ಅವರು ಶುಕ್ರವಾರ ಸಂಜೆ 8.15ರ ವೇಳೆಗೆ ಬಂದು ಸದನದಲ್ಲಿ ಸೋಮವಾರ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲಾ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಮುಂದೇ ಏನಾಗಲಿದೆ ಎಂದು ಕಾದು ನೋಡುತ್ತೇವೆ ಎಂದರು.
ಇಡೀ ದೇಶನದ ಜನರು ಸದನವನ್ನು ಗಮನಿಸುತ್ತಿದ್ದಾರೆ. ಮುಂಬೈನಲ್ಲಿರುವ ಶಾಸಕರಿಗೆ ಸದನಕ್ಕೆ ಬರಲು ಒತ್ತಾಯಿಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಅವರು 98 ಹಾಗೂ ನಾವು 106 ಶಾಸಕರು ಇದ್ದೇವೆ. ಸೋಮವಾರ ಏನಾಗುತ್ತೆ ಎನ್ನುವುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇತ್ತ ಸೋಮವಾರ ಸದನ ಮುಂದೂಡಿಕೆ ಆಗಿರುವುದರಿಂದ ಬಿಜೆಪಿ ಶಾಸಕರು ರೆಸಾರ್ಟಿಗೆ ತೆರಳಲು ಸಿದ್ಧತೆ ನಡೆಸಿದರು. ನಿನ್ನೆ ಬೆಳಗ್ಗೆಯಿಂದಲೂ ವಿಧಾನಸೌಧದಲ್ಲೇ ಇರುವ ಶಾಸಕರು ಸೋಮವಾರದವರೆಗೂ ರೆಸಾರ್ಟ್ ವಾಸ್ತವ್ಯ ಮುಂದೂವರಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಮೈತ್ರಿ ಸರ್ಕಾರದ ನಡೆಯಿಂದ ಬಿಎಸ್ವೈ ಶಾಸಕರಿಗೆ ಒಗ್ಗಟ್ಟಿನಿಂದ ಇರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ನಾಳೆ ಮತ್ತೆ ರೆಸಾರ್ಟಿನಲ್ಲಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಜೆಡಿಎಸ್ ಶಾಸಕರು ಕೂಡ ರೆಸಾರ್ಟ್ ಕಡೆ ನಡೆದಿದ್ದು, ಸೋಮವಾರದವರೆಗೂ ಅಲ್ಲಿಯೇ ಉಳಿಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಕೂಡ ಡಿಸಿಎಂ ಪರಮೇಶ್ವರ್ ಅವರ ನೇತೃತ್ವದಲ್ಲಿ ನಗರದ ತಾಜ್ ವಿವಾಂತ ಹೋಟೆಲ್ಗೆ ತೆರಳಿದ್ದಾರೆ.