ಚಿಕ್ಕೋಡಿ: ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮ ಪಂಚಾಯಿತಿಗೆ ಕಳೆದ 2020 ಡಿಸೆಂಬರ್ 23 ರಂದು ಚುನಾವಣೆ (Panchayat Election) ನಡೆದು, ಅದರ ಫಲಿತಾಂಶ ಕೂಡ ಅದೇ ಡಿಸೆಂಬರ್ 30 ರಂದು ಹುಕ್ಕೇರಿಯಲ್ಲಿ ಹೊರಬಿದ್ದಿತ್ತು. ಈ ಚುನಾವಣೆಯಲ್ಲಿ ಹೆಬ್ಬಾಳ ಗ್ರಾಮದ ವಾರ್ಡ್ ನಂ.2 ರ ಹಿಂದುಳಿದ ‘ಬ’ ಸ್ಥಾನಕ್ಕೆ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿತ್ತು. ಕೊನೆಗೆ 1 ಮತದ ಅಂತರದಿಂದ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಆದರೆ ಈ ಬಗ್ಗೆ ಅಸಮಾಧಾನಗೊಂಡಿದ್ದ ಪರಾಜಿತ ಅಭ್ಯರ್ಥಿ ಮರು ಮತ ಎಣಿಕೆ (votes Re-counting)ನಡೆಸುವಂತೆ ಕೋರ್ಟ್ ಮೇಟ್ಟಿಲೇರಿದ್ದರು.
ಚುನಾವಣೆ ಮುಗಿದು ಬರೋಬ್ಬರಿ 1 ವರ್ಷ, 10 ತಿಂಗಳು ಕಳೆದ ಬಳಿಕ ಈಗ ಮತ್ತೆ ಮರು ಮತ ಎಣಿಕೆಗೆ ಕೋರ್ಟ್ ಆದೇಶ ನೀಡಿದೆ. ಇದೇ ಬರುವ ಅಕ್ಟೋಬರ್ 20 ರಂದು ಕೋರ್ಟ್ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮರು ಮತ ಎಣಿಕೆ ನಡೆಯಲಿದ್ದು, ಎಲ್ಲರ ಚಿತ್ತ ಈಗ ಕೋರ್ಟ್ನತ್ತ ನೆಟ್ಟಿದೆ.
1 ಮತದಿಂದ ಸೋತಿದ್ದ ರಾವಸಾಹೇಬ ಪಾಟೀಲ್, ತನ್ನ ದೃಢ ನಂಬಿಕೆಯಿಂದ ಕೋರ್ಟ್ನಲ್ಲಿ ತನ್ನ ವಕೀಲರ ಮೂಲಕ ವಾದ ಮಂಡಿಸಿದರು. ಮರು ಮತ ಎಣಿಕೆ ನಡೆಸುವಂತೆ ಕೋರ್ಟ್ ಆದೇಶ ನೀಡಿದ್ದು, ಈಗ ಮರು ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ ಮತ್ತಷ್ಟು ಗೊಂದಲ ಹಾಗೂ ಕೂತಹಲಕ್ಕೂ ಕಾರಣವಾಗಲಿದೆ. ಇದನ್ನೂ ಓದಿ: ಸೇ ಸಿಎಂ ಅಭಿಯಾನ ಉದ್ಯೋಗವಿಲ್ಲದವರು ಮಾಡುತ್ತಿದ್ದಾರೆ: ಬೊಮ್ಮಾಯಿ
2020ರ ಡಿಸೆಂಬರ್ 30 ರಂದು ನಡೆದ ಮತ ಎಣಿಕೆ ವೇಳೆ ಗೆದ್ದ ಅಭ್ಯರ್ಥಿ 506 ಮತ ಪಡೆದಿದ್ದು, ಪರಾಜಿತ ಅಭ್ಯರ್ಥಿ ರಾವಸಾಹೇಬ ಪಾಟೀಲ್ 505 ಮತ ಪಡೆದಿದ್ದರು. ಅಂದು ಮರು ಮತ ಎಣಿಕೆ ನಡೆಸುವಂತೆ ಮನವಿ ಮಾಡಿದ್ದರೂ ಚುನಾವಣಾ ಅಧಿಕಾರಿಗಳು ಗೆದ್ದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಿಯೇ ಬಿಟ್ಟಿದ್ದರು. ಇದರಿಂದ ಅಸಮಾಧಾನಗೊಂಡ ರಾವಸಾಹೇಬ ಪಾಟೀಲ್ ಕೋರ್ಟ್ ಮೂಲಕ ಮರು ಮತ ಎಣಿಕೆ ನಡೆಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಕೋರ್ಟ್ ಇದೀಗ 1 ವರ್ಷ 10 ತಿಂಗಳ ಬಳಿಕ ಮರು ಎಣಿಕೆಗೆ ಆದೇಶಿಸಿದ್ದು, ಹಲವು ಗೊಂದಲಕ್ಕೂ ಕಾರಣವಾಗಿದೆ. ಈಗ ಮರು ಮತ ಎಣಿಕೆ ವೇಳೆ ರಾವಸಾಹೇಬ ಪಾಟೀಲ್ ಗೆದ್ದರೆ, ಸೋತ ಅಭ್ಯರ್ಥಿ 2 ವರ್ಷ ಅಧಿಕಾರ ಅನುಭವಿಸಿದ ದಾಖಲೆ ಒಂದು ಕಡೆಯಾಗುತ್ತದೆ. ಜೊತೆಗೆ ರಾವಸಾಹೇಬ ಪಾಟೀಲ್ ಜಯ ಗಳಿಸಿದರೂ 2 ವರ್ಷ ಅಧಿಕಾರ ವಂಚಿತರಾಗುತ್ತಾರೆ. 2 ವರ್ಷದಿಂದ ಪಂಚಾಯಿತಿ ಸದಸ್ಯನಾಗಿರುವ ವ್ಯಕ್ತಿಗೆ ಅನರ್ಹತೆ ಭೀತಿ ಈಗ ಎದುರಾಗಿದೆ. ಇದನ್ನೂ ಓದಿ: ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ