ಜೈಪುರ: ತರಕಾರಿ ವ್ಯಾಪಾರಿಯೋರ್ವನನ್ನು ಕಳ್ಳನೆಂದು ತಿಳಿದ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರಂಜಿ ಸೈನಿ(45) ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಾಗಿದ್ದನು. ಅವನನ್ನು ಅಲ್ಲಿನ ಗುಂಪೊಂದು ಕಳ್ಳ ಎಂದು ಭಾವಿಸಿದೆ.
ಚಿರಂಜಿ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರು ಆತನ ಮೇಲೆ ಹಲ್ಲೆ ನಡೆಸಿ, ಆತನನ್ನು ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಿರಂಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಘಟನೆಯೇನು?: ರಾಂಬಾಸ್ ಗ್ರಾಮದಲ್ಲಿ ಟ್ರ್ಯಾಕ್ಟರ್ನ್ನು ಕೆಲ ಕಳ್ಳರು ಕದ್ದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಆ ಕಳ್ಳರನ್ನು ಬೆನ್ನಟ್ಟಿದ್ದಾರೆ. ಆದರೆ ಆ ಕಳ್ಳರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.
ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ತರಕಾರಿ ವ್ಯಾಪಾರಿ ಚಿರಂಜಿಯನ್ನು ಕಳ್ಳನೆಂದು ಟ್ರ್ಯಾಕ್ಟರ್ ಮಾಲೀಕ ತಪ್ಪಾಗಿ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಹಾಗೂ ಅವರ ಕಡೆಯವರು ಆ ತರಕಾರಿ ವ್ಯಾಪಾರಿಯನ್ನು ಮನ ಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ
ಇದೇ ಸಂದರ್ಭಕ್ಕೆ ಅಲ್ಲಿಗೆ ಪೊಲೀಸರು ಬಂದಿದ್ದು, ಆತ ಕಳ್ಳನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಮಂದಿಯಿಂದ ಅತ್ಯಾಚಾರ
ಘಟನೆ ಸಂಬಂಧಿಸಿ ಮೃತನ ಪುತ್ರ ಯೋಗೇಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆಯ ಸಾವಿಗೆ ಟ್ರ್ಯಾಕ್ಟರ್ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾನೆ.