ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai,) ಕುಂಟಿಕೊಂಡು ಕುಂಟಿಕೊಂಡು ಏನು ಮಾಡುತ್ತಾರೆ? ಪಾಪ.. ಇನ್ನೂ ಯಡಿಯೂರಪ್ಪಗೆ (Yediyurappa) ನೆನಪಿನ ಶಕ್ತಿಯೇ ಇಲ್ಲ. ಇವರು ಬಿಜೆಪಿ ಜನ ಸಂಕಲ್ಪ ಯಾತ್ರೆ ಮಾಡಿ ಏನು ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ (Dr.M. Veerappa Moily) ಲೇವಡಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ (Chikkaballapura) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ (BJP) ಸಂಕಲ್ಪವೇ ಸರಿ ಇಲ್ಲ, ಇನ್ನೂ ಜನ ಸಂಕಲ್ಪವಂತೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ 150 ಸೀಟ್ ಬಂದರೂ ಆಶ್ಚರ್ಯವಿಲ್ಲ. ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ನ ಹುಮ್ಮಸ್ಸು ಇಮ್ಮಡಿಯಾಗಿದೆ ಎಂದರು.
ರಾಜ್ಯದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ ಸಂಬಂಧ ಮಾತನಾಡಿ, ಮೀಸಲಾತಿ ಹೆಚ್ಚಳಕ್ಕೆ ಕಾನೂನು, ಸಂವಿಧಾನ ತೊಡಕು ಇದೆ. ಬಿಜೆಪಿಯವರು ಬರಿ ಬೊಗಳೆ ಬಿಡುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸಂವಿಧಾನಬದ್ಧ ಹೆಜ್ಜೆ ಇಡಬೇಕು. ಸುಮ್ಮನೆ ಘೋಷಣೆ ಮಾಡಿದರೆ ಮೀಸಲಾತಿ ಹೆಚ್ಚಳ ಮಾಡಿದಂತೆ ಅಲ್ಲ. ಇದುವರೆಗೂ ಕಾಂತರಾಜ್ ಆಯೋಗದ ವರದಿ ಬಯಲು ಮಾಡಲಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಭರ್ಜರಿ ಮಳೆ – ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ನಾಲ್ಕೂವರೆ ಪಟ್ಟು ಅಧಿಕ ನೀರು ಬಿಡುಗಡೆ
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಶಿಕ್ಷಕರ ನೇಮಕಾತಿ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಗರಣ ಆಗಿದ್ದರೆ ಸಾಕ್ಷಿ ಸಮೇತ ಆಚೆ ಬಿಡಿ, ಬರಿ ಬುಟ್ಟಿಯಲ್ಲಿ ಹಾವು ಇದೆ, ಹಾವು ಇದೆ ಅಂತ ಬುಸ್ಸು ಬುಸ್ಸು ಮಾಡುತ್ತಿದ್ದಾರೆ ಅಷ್ಟೇ. ಬುಟ್ಟಿಯಲ್ಲಿ ಹಾವು ಇದ್ದರೆ ತಾನೇ ಬುಟ್ಟಿ ತೆಗೆಯುವುದು ಎಂದು ವ್ಯಂಗ್ಯವಾಡಿದರು.
ಬಿಜೆಪಿಯವರಿಗೆ ಬೇರೆ ಏನು ಅಜೆಂಡಾ ಇಲ್ಲ. ದೇಶವನ್ನು ಒಡೆದು ಕೋಮು ಸಂಘರ್ಷ ಉಂಟು ಮಾಡುವುದೇ ಅವರ ಕಾಯಕ. ರಾಜ್ಯದಲ್ಲಿ ಇಲ್ಲದ ವಿವಾದವನ್ನು ಸೃಷ್ಟಿ ಮಾಡುತ್ತಿದ್ದಾರೆ. ವಿವಾದದಿಂದ ಬಿಜೆಪಿಗೆ ವೋಟ್ ಬರಲ್ಲ. ಕುವೆಂಪು ಆಶಯಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಅಣಕಿಸಿದರು. ಇದನ್ನೂ ಓದಿ: ಮತವನ್ನು ಮಾರಿಕೊಳ್ಳುವವರು ಶವಕ್ಕೆ ಸಮಾನ – ರಾತ್ರೋರಾತ್ರಿ ಗೋಡೆಗಳ ಮೇಲೆ ಪೋಸ್ಟರ್
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲಂಚ ಮೀತಿ ಮೀರಿದೆ. ರಾಜ್ಯದಲ್ಲಿ ಏನ್ ಮಾಡಿದರೂ ಲಂಚ, ಲಂಚ ಎನ್ನುವಂತಾಗಿದೆ. ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸುತ್ತಿಲ್ಲ. ಹಣ ಗಳಿಸುವುದೇ ಬಿಜೆಪಿಯವರ ಸಾಧನೆ. ಹಣ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭ್ರಮೆಯಲ್ಲಿದ್ದಾರೆ. ಹಣದಿಂದಲೇ ಎಲ್ಲವನ್ನು ಖರೀದಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರದ ರುಚಿ ಕಂಡಿದೆ. ಹಣದಿಂದಲೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಹಣ ಮಾಡುವುದು ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡುವುದು ಬಿಜೆಪಿ ಕಾಯಕವಾಗಿದೆ ಎಂದು ಕಿಡಿಕಾರಿದರು.