ಮಂಗಳೂರು: ಇದುವರೆಗೂ ಶ್ರೀಮಂತರಿಗೆ, ವಿಮಾನದಲ್ಲಿ ಸಂಚರಿಸಿದವರಿಗೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರಿಗೆ ಮಾತ್ರ ಕೊರೊನಾ ಸೋಂಕು ಬಂದಿದೆ. ನಿಮ್ಮಂಥ ಕಷ್ಟದ ಕೆಲಸ ಮಾಡುವವರಿಗೆ ಕೊರೊನಾ ಬರುವುದಿಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಉಳ್ಳಾಲ ನಗರಸಭೆಯ ಪೌರಕಾರ್ಮಿಕರಿಗೆ ಧೈರ್ಯ ತುಂಬಿದ್ದಾರೆ.
ಯು.ಟಿ.ಖಾದರ್ ತಮ್ಮ ಸ್ವ-ಕ್ಷೇತ್ರ ಉಳ್ಳಾಲ ವ್ಯಾಪ್ತಿಯ ನಗರಸಭೆ ಕಚೇರಿಗೆ ಭೇಟಿ ನೀಡಿ ಅಲ್ಲಿದ್ದ ಪೌರಕಾರ್ಮಿಕರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಕೊರೊನಾ ಭೀತಿ ಜಿಲ್ಲೆಯಲ್ಲಿ ಹೆಚ್ಚಿರುವ ಕಾರಣ, ದಿನ ನಗರವನ್ನು ಶುಚಿಗೊಳಿಸುವ ಕಾರ್ಮಿಕರು ಧೈರ್ಯ ಕಳೆದುಕೊಳ್ಳದಂತೆ ಅವರಿಗೆ ಧೈರ್ಯ ತುಂಬಿದ್ದಾರೆ.
ನೀವು ಗಾಬರಿ ಪಡಬೇಕಾದ ಅಗತ್ಯವಿಲ್ಲ. ಇದುವರೆಗೆ ಕೊರೊನಾ ಶ್ರೀಮಂತರಿಗೆ, ವಿಮಾನದಲ್ಲಿ ಸಂಚರಿಸಿದವರಿಗೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಇರುವವರಿಗೆ ಬಂದಿದೆ. ಹಾಗೆಂದು ಯಾರೂ ಕೂಡ ನಿರ್ಲಕ್ಷ್ಯ ಮಾಡದೆ ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಖಾದರ್ ಅವರ ಮಾತು ವಿರೋಧಕ್ಕೂ ಕಾರಣವಾಗಿದೆ. ಕೇಂದ್ರ ಆರೋಗ್ಯ ಇಲಾಖೆ, ಸಾಮೂಹಿಕವಾಗಿ ಕೊರೊನಾ ಸೋಂಕು ಹರಡುತ್ತೆ, ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮ ಅನುಸರಿಸಬೇಕು. ಎಲ್ಲಾ ವರ್ಗದ ಜನರಿಗೂ ಈ ಸೋಂಕು ಹರಡುತ್ತದೆ ಎಂದಿದೆ. ಹೀಗಿದ್ದರೂ ಓರ್ವ ಶಾಸಕ ಈ ರೀತಿ ಶ್ರೀಮಂತರಿಗೆ ಮಾತ್ರ ಕೊರೊನಾ ಬರೋದು ಎಂದು ಹೇಳುವ ಮೂಲಕ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.