ಭೋಪಾಲ್: ರಾಮ ಮಂದಿರ ನಿರ್ಮಾಣಕ್ಕಾಗಿ ನಾನು ನೀಡಿದ್ದ ದೇಣಿಗೆ (Ram Mandir Donation) ದುರುಪಯೋಗವಾಗಿದೆ ಎಂದು ಅಯೋಧ್ಯೆಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ (Digvijaya Singh) ಹೇಳಿದ್ದಾರೆ. ಅಲ್ಲದೇ ತಮ್ಮ ದೇಣಿಗೆಯನ್ನು ಹಿಂದಿರುಗಿಸುವಂತೆ ಒತ್ತಾಯಿಸುವುದಾಗಿಯೂ ಹೇಳಿದ್ದಾರೆ.
ನಾನು ನೀಡಿದ ದೇಣಿಗೆಯನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದರ ವಿರುದ್ಧ ಅಯೋಧ್ಯೆ ಕೋರ್ಟ್ನಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ. ದೇಣಿಗೆ ನೀಡಿದ್ದ ಹಣವನ್ನ ಅವರು ಲೂಟಿ ಮಾಡಿದ್ದಾರೆ, ಆದ್ದರಿಂದ ಅದನ್ನ ನನಗೆ ಹಿಂದಿರುಗಿಸಬೇಕು. ನಂತರ ನಾನು ಅದನ್ನ ‘ರಾಮಾಲಯ ಟ್ರಸ್ಟ್’ಗೆ ಜಮೆ ಮಾಡಬಹುದು ಎಂದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ನನಗೆ ನಂಬಿಕೆಯಿಲ್ಲ, ಏಕೆಂದ್ರೆ ಪೊಲೀಸರನ್ನ ಬಿಜೆಪಿ ನಿಯಂತ್ರಿಸುತ್ತದೆ. ಆದ್ದರಿಂದ ನಾನು ಅಯೋಧ್ಯೆಯ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ದೇವಸ್ಥಾನಕ್ಕಾಗಿ ಎರಡು ಬಾರಿ ದೇಣಿಗೆ
ದಿಗ್ವಿಜಯ್ ಸಿಂಗ್, ರಾಮ ಮಂದಿರ ದೇಣಿಗೆ ಸಂಗ್ರಹ ಅಭಿಯಾನವನ್ನ ಎರಡು ಬಾರಿ ನಡೆಸಲಾಯಿತು. ಎಲ್.ಕೆ. ಅಡ್ವಾಣಿ ಅವರ ರಥಯಾತ್ರೆಯ ಸಮಯದಲ್ಲಿ ನಾನು ಮೊದಲ ಬಾರಿಗೆ ದೇಣಿಗೆ ನೀಡಿದ್ದೆ. ನಮಗೆ ರಾಮ ಮಂದಿರ ಮತ್ತು ಶ್ರೀರಾಮನ ಮೇಲೆ ನಂಬಿಕೆ ಇದೆ. ಆದರೆ ಮೊದಲ ಬಾರಿಗೆ ಸಂಗ್ರಹಿಸಿದ ದೇಣಿಗೆಗಳಿಗೆ ಎಂದಿಗೂ ಲೆಕ್ಕಪತ್ರ ಕೊಡಲಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ (ಶ್ರೀ ರಾಮ ಜನ್ಮಭೂಮಿ vs. ಬಾಬರಿ ಮಸೀದಿ ವಿವಾದ), ಮತ್ತೆ ನಿಧಿಸಂಗ್ರಹ ಅಭಿಯಾನ ಶುರು ಮಾಡಿ. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಈ ಅಭಿಯಾನ ಪ್ರಾರಂಭಿಸಿತ್ತು. ಆದ್ರೆ ನಾನು ಅವರಿಗೆ ದೇಣಿಗೆ ನೀಡಲಿಲ್ಲ, ಏಕೆಂದರೆ ನನಗೆ ಅವರ ಮೇಲೆ ನಂಬಿಕೆ ಇರಲಿಲ್ಲ. ನೇರವಾಗಿ ಟ್ರಸ್ಟ್ಗೆ ದೇಣಿಗೆ ನೀಡಿದ್ದೆ ಎಂದು ಉತ್ತರಿಸಿದ್ದಾರೆ.
ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಮ ಮಂದಿರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ್ದರು. ನಾನು ಅದಕ್ಕಿಂತಲೂ ಹೆಚ್ಚು ನೀಡಬೇಕೆಂದು 1.11 ಲಕ್ಷ ರೂ. ದೇಣಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಆ ಮೊತ್ತವನ್ನ ಟ್ರಸ್ಟ್ನಲ್ಲಿ ಠೇವಣಿ ಇಡುವಂತೆ ವಿನಂತಿಸಿದ್ದೆ. ಹಣವನ್ನ ನಾವೇ ಠೇವಣಿ ಇಟ್ಟು, ಅದಕ್ಕೆ ರಶೀದಿಯನ್ನೂ ಪಡೆದುಕೊಂಡಿದ್ದೇವೆ. ರಾಮನ ಮೇಲಿನ ನಂಬಿಕೆ ಮತ್ತು ಭವ್ಯ ದೇವಾಲಯ ನಿರ್ಮಿಸುವ ಬಯಕೆಯಿಂದ ಈ ದೇಣಿಗೆ ನೀಡಿದ್ದೆ. ಆದರೆ ಈಗ ಕೇಳಿಬರುತ್ತಿರುವ ಆರೋಪಗಳು ಅತ್ಯಂತ ದುಃಖಕರವಾಗಿದೆ. ಹಾಗಾಗಿ ನನ್ನ ದೇಣಿಗೆ ನನಗೆ ವಾಪಸ್ ಸಿಗಬೇಕು. ಇದರ ವಿರುದ್ಧ ಮೊಕದ್ದಮೆ ಹೂಡುವುದಾಗಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
