ಲಕ್ನೋ: 2008ರಲ್ಲಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿಯೊಬ್ಬನ ಮನೆಯ ಸಂಬಂಧಿ ಜೊತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತಯಾಚಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಅಹಮದಾಬಾದ್ ನ್ಯಾಯಾಲಯವು 2008ರ ಸರಣಿ ಸ್ಫೋಟ ಪ್ರಕರಣದಲ್ಲಿ 38 ಭಯೋತ್ಪಾದಕರಿಗೆ ಶಿಕ್ಷೆಯ ಪ್ರಮಾಣ ಘೋಷಿಸಿತು. ಅಪರಾಧಿಗಳಿಗೆ ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆ ನೀಡಿತು. ಅವರಲ್ಲಿ ಉತ್ತರ ಪ್ರದೇಶದ ಕೆಲವು ಭಯೋತ್ಪಾದಕರೂ ಇದ್ದಾರೆ. ಅವರಲ್ಲಿ ಒಬ್ಬ ಅಪರಾಧಿಯ ಕುಟುಂಬದ ಸದಸ್ಯನೊಬ್ಬ ಎಸ್ಪಿ ಮುಖ್ಯಸ್ಥರೊಂದಿಗೆ ಪಕ್ಷಕ್ಕೆ ಮತ ಕೇಳುತ್ತಿರುವುದು ಕಂಡುಬಂದಿದೆ ಎಂದು ಯೋಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ – 38 ಮಂದಿಗೆ ಮರಣ ದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ
ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದು ಎಂದರೆ ಭಯೋತ್ಪಾದಕರಿಗೆ ಬೆಂಬಲ ನೀಡಿದಂತೆ. ಎಲ್ಲವೂ ಬದಲಾಗಿದೆ ಆದರೆ ಮುಲಾಯಂ ಸಿಂಗ್ ಯಾದವ್ ಸ್ಥಾಪಿಸಿದ ಪಕ್ಷವು ಹಾಗೆಯೇ ಉಳಿದಿದೆ ಎಂದು ಟೀಕಿಸಿದ್ದಾರೆ.
ಹಿಂದಿನ ಸರ್ಕಾರಗಳ ಆಡಳಿತದಲ್ಲಿ ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಬಡವರು ಹಸಿವಿನಿಂದ ಸಾಯುತ್ತಿದ್ದರು. ಜಂಗಲ್ ರಾಜ್ ಇತ್ತು. ಅಪರಾಧಿಗಳು ಅಧಿಕಾರ ನಡೆಸುತ್ತಿದ್ದರು. ಪೊಲೀಸ್ ಠಾಣೆಗಳನ್ನು ರೌಡಿಶೀಟರ್ಗಳು ನಿಯಂತ್ರಿಸುತ್ತಿದ್ದರು. ಉದ್ಯಮಗಳನ್ನು ನಾಶಪಡಿಸಲಾಗಿತ್ತು. ಯುವಕರು ನಿರುದ್ಯೋಗಿಗಳಾಗಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮತಗಟ್ಟೆಯಲ್ಲಿ ತೊಂದರೆಯಾಗಿದ್ದಕ್ಕೆ ಕ್ಷಮೆ ಕೇಳಿದ ತಮಿಳು ನಟ ವಿಜಯ್
ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಿನ್ನೆ ನಡೆಸಲಾಯಿತು. ಸ್ಫೋಟದಲ್ಲಿ 56 ಜನರ ಸಾವಿಗೆ ಕಾರಣವಾದ 36 ಅಪರಾಧಿಗಳಿಗೆ ಮರಣ ದಂಡನೆ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.