ಉಡುಪಿ: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರ ಆರೋಗ್ಯದ ಕುರಿತಾಗ ಹೆಲ್ತ್ ಬುಲೆಟಿನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಬಿಡುಗಡೆ ಮಾಡಿದೆ. ಜೊತೆಗೆ ಚಿಕಿತ್ಸಾ ವಿಧಾನವನ್ನು ಕೂಡ ಕೊಂಚಮಟ್ಟಿಗೆ ಬದಲಿಸಿದೆ.
ಪೇಜಾವರ ಸ್ವಾಮೀಜಿ ಅನಾರೋಗ್ಯದಿಂದ ಬಳಲುತ್ತಿದ್ದು ಕೆಎಂಸಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಏಳನೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಸ್ವಾಮೀಜಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಿರಂತರ ಚಿಕಿತ್ಸೆ ನೀಡುತ್ತಿರುವುದರಿಂದ ಸ್ಥಿರವಾಗಿದೆ. ಶ್ರೀಗಳು ವೆಂಟಿಲೇಟರ್ ಮೂಲಕ ಉಸಿರಾಟ ನಡೆಸುತ್ತಿದ್ದಾರೆ. ಅವರಾಗಿಯೂ ಉಸಿರಾಡಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.
ಪೇಜಾವರಶ್ರೀ ಚಿಕಿತ್ಸಾ ಕ್ರಮ ಬದಲು ಮಾಡಲಾಗಿದೆ. ಚಿಕಿತ್ಸಾ ವಿಧಾನ ಬದಲಿಸಿ ನೋಡಲು ವೈದ್ಯರು ಮುಂದಾಗಿದ್ದಾರೆ. ಈ ಕುರಿತು ಕಿರಿಯ ಶ್ರೀಗಳ ಜೊತೆ ಚರ್ಚೆ ಮಾಡಿರುವ ಡಾಕ್ಟರ್ಸ್ ಟೀಂ, ತಜ್ಞವೈದ್ಯರಿಂದ ಹೆಚ್ಚಿನ ವ್ಯವಸ್ಥೆ ಮಾಡಿಸಿದ್ದಾರೆ. ಕಫ ಕರಗಿಸಲು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಎಂಸಿ ಮತ್ತು ಪೇಜಾವರ ಮಠದ ಮೂಲಗಳು ತಿಳಿಸಿವೆ.