– ಗ್ರಹಣಕಾಲದಲ್ಲಿ ಭಕ್ತರೇನು ಮಾಡಬೇಕು?
ಉಡುಪಿ: ಇಂದು ರಾತ್ರಿ 10.32 ರಿಂದ 2.47 ರವರೆಗೆ ಚಂದ್ರನ ಛಾಯಾ ಗ್ರಹಣವಿದೆ. ಕೆಲ ದೇವಸ್ಥಾನ ಮಠಗಳಲ್ಲಿ ಧಾರ್ಮಿಕ ವಿಧಿ-ವಿಧಾನ, ಪೂಜಾ ಪ್ರಕ್ರಿಯೆಗಳಲ್ಲಿ ಬದಲಾವಣೆ ಇದೆ. ಆದರೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಯಾವುದೇ ವ್ಯತ್ಯಾಸ, ಬದಲಾವಣೆ ಇಲ್ಲ.
ಗ್ರಹಣ ಕಾಲದಲ್ಲಿ ವಿಶೇಷ ಪೂಜೆ, ಜಪ ತಪಗಳು ಇರುವುದಿಲ್ಲ. ಭೂಮಿಯ ದಟ್ಟನೆರಳಿನ ಭಾಗವನ್ನು ಮುಟ್ಟದೆ ಚಂದ್ರ ಹಾದು ಹೋಗುವುದರಿಂದ ಗ್ರಹಣ ಗೋಚರ ಇರೋದಿಲ್ಲ. ಕಣ್ಣಿಗೆ ಗೋಚರವಾಗುವಂತೆ ಚಂದ್ರನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಉಡುಪಿಯಲ್ಲಿ ವೀಕ್ಷಣಾ ವ್ಯವಸ್ಥೆ ಕೂಡ ಮಾಡಿಲ್ಲ. ಹೀಗಾಗಿ ಕೃಷ್ಣಮಠದಲ್ಲಿ ಬದಲಾವಣೆ ಇಲ್ಲ.
ಪಂಚಾಂಗದಲ್ಲಿ ಎಲ್ಲವೂ ಸ್ಪಷ್ಟವಿದೆ. ಚಂದ್ರನ ಛಾಯಾಕಲ್ಪವಿದೆ. ಭೂಮಿಯ ವಿರಳ ಛಾಯೆಯನ್ನು ಚಂದ್ರ ಪ್ರವೇಶ ಮಾಡಿ ಹೋಗುತ್ತಾನೆ. ಎಲ್ಲವೂ ಸಾಮಾನ್ಯದಂತೆ ಇರುತ್ತದೆ. ಖಗ್ರಾಸ ಖಂಡಗ್ರಾಸ ಪಾಶ್ರ್ವಗ್ರಹಣ ಆಗುತ್ತಿರುವುದರಿಂದ ದೊಡ್ಡ ವ್ಯತ್ಯಾಸ ದುಷ್ಪರಿಣಾಮ ಇರೋದಿಲ್ಲ ಎಂದು ಧಾರ್ಮಿಕ ವಿದ್ವಾಂಸ ವಿಷ್ಣುಮೂರ್ತಿ ಮಂಜಿತ್ತಾಯ ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಇದನ್ನೂ ಓದಿ: ದೇವಸ್ಥಾನಗಳಲ್ಲಿ ಗ್ರಹಣದ ವಿಶೇಷ ಪೂಜೆ ಇಲ್ಲ
ಮಠದ ಭಕ್ತ ರಮೇಶ್ ಭಟ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ರಾಜ್ಯದ ಕೆಲಭಾಗದ ಜನ ಆಚರಿಸಬಹುದು. ಶಾಸ್ತ್ರದಲ್ಲಿ ಕೂಡ ಇದರ ಬಗ್ಗೆ ಉಲ್ಲೇಖ ಇಲ್ಲ. ನಮ್ಮ ನೆರಳಿನ ಮೇಲೆ ಹಾದು ಹೋದರೆ ಸಮಸ್ಯೆಯಿಲ್ಲ. ಜಪ-ತಪ ಮಾಡಿದರೆ ಯಾವುದೇ ನಷ್ಟ ಇಲ್ಲ. ಲಾಭವೇ ಆಗುವುದರಿಂದ ಮಾಡುವವರು ಮಾಡಬಹುದು ಎಂದು ಹೇಳಿದರು.
ಮೂಕಾಂಬಿಕಾ ದೇವಸ್ಥಾನದಲ್ಲಿ ಗ್ರಹಣ ಪರ್ವಕಾಲದಲ್ಲಿ ಮಹಾ ಮಂಗಳಾರತಿ ನಡೆಯಲಿದೆ. ಇದನ್ನು ಹೊರತುಪಡಿಸಿ ಯಾವುದೇ ವ್ಯತ್ಯಾಸ ಇರೋದಿಲ್ಲ. ದೇವಸ್ಥಾನ ಮುಚ್ಚದೆ, ಅರ್ಚಕರು ಈ ಪೂಜೆ ನಡೆಸಲಿದ್ದಾರೆ. ಭಕ್ತರು ಆ ಹೊತ್ತಿಗೆ ದೇಗುಲದಲ್ಲಿ ಇರುವ ಸಾಧ್ಯತೆ ಕಡಿಮೆಯಿದೆ.