ಉಡುಪಿ: ಸಾಂಕ್ರಾಮಿಕ ರೋಗ ಕೋವಿಡ್ ಆವರಿಸಿದ ಕಾರಣ ಅನ್ನಬ್ರಹ್ಮನ ಕ್ಷೇತ್ರ ಉಡುಪಿ ಶ್ರೀಕೃಷ್ಣಮಠದಲ್ಲಿ ಸಾರ್ವಜನಿಕ ಅನ್ನದಾಸೋಹವನ್ನು ನಿಲ್ಲಿಸಲಾಗಿತ್ತು. ಕೊರೊನಾ ಪಾಸಿಟಿವಿಟಿ ರೇಟ್ ಇಳಿಕೆಯಾಗುತ್ತಿದ್ದಂತೆ ಮತ್ತೆ ಮಠದಲ್ಲಿ ಭೋಜನ ಪ್ರಸಾದ ಆರಂಭಿಸಲಾಗಿದೆ. ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.
ಅನ್ನಬ್ರಹ್ಮನ ಕ್ಷೇತ್ರ ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿ ಮತ್ತೆ ಸಾರ್ವಜನಿಕ ಅನ್ನಸಂತರ್ಪಣೆ ಆರಂಭವಾಗಿದೆ. 2020ರಲ್ಲಿ ಕೊರೊನಾ ಆವರಿಸಿದ ನಂತರ ಉಡುಪಿ ಶ್ರೀಕೃಷ್ಣಮಠದಲ್ಲಿ ನಿಬಂಧನೆಗಳನ್ನು ಹಾಕಲಾಗಿತ್ತು. ಸಾರ್ವಜನಿಕವಾಗಿ ಮಠದ ಒಳಗೆ ಪ್ರವೇಶವನ್ನು ಕೂಡ ನಿಷೇಧಿಸಲಾಗಿತ್ತು. ಪಾಸಿಟಿವಿಟಿ ರೇಟ್ ಇಳಿಕೆಯಾದ ನಂತರ ನಿಯಮಬದ್ಧವಾಗಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ಮಾತ್ರ ಅನ್ನಪ್ರಸಾದವನ್ನು ವಿತರಣೆ ಮಾಡಲಾಗಿತ್ತು. ಕೋವಿಡ್ ನ ಎರಡನೇ ಅಲೆ ಆವರಿಸಿರುವ ಕಾರಣ ಭೋಜನ ಪ್ರಸಾದ ನಿಲ್ಲಿಸಲಾಗಿತ್ತು.
ಮಠದ ಭೋಜನಶಾಲೆಯಲ್ಲಿ ಈಗ ಬಫೆಟ್ ಮಾದರಿಯಲ್ಲಿ ಅನ್ನಪ್ರಸಾದವನ್ನು ವಿತರಣೆ ಮಾಡಲಾಗುತ್ತಿದೆ. ಮೂರು ಕೌಂಟರ್ ಗಳನ್ನು ಮಾಡಲಾಗಿದ್ದು ಜನರು ಸಾಮಾಜಿಕ ಅಂತರದ ನಿಯಮ ಪಾಲಿಸುವ ವ್ಯವಸ್ಥೆಯನ್ನು ಪರ್ಯಾಯ ಅದಮಾರು ಮಠದ ಸಿಬ್ಬಂದಿ ಮಾಡಿದ್ದಾರೆ. ಮೊದಲ ದಿನ ಮಠದಲ್ಲಿ ಮಧ್ಯಾಹ್ನ ಎರಡೂವರೆ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕಾರ ಮಾಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳ ಉಡುಪಿ ಕೃಷ್ಣಮಠ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಧಾರ್ಮಿಕ ಪ್ರವಾಸ ಮಾಡುವ ಸಂದರ್ಭ ಭಕ್ತರು ಮಧ್ಯಾಹ್ನದ ಅನ್ನ ಪ್ರಸಾದಕ್ಕೆ ಕೃಷ್ಣಮಠಕ್ಕೆ ಬರುವುದನ್ನು ಹಲವು ವರ್ಷಗಳಿಂದ ಅನುಸರಿಸುತ್ತಿದ್ದಾರೆ. ಇದನ್ನೂ ಓದಿ: ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ
ಮಧ್ಯಾಹ್ನದ ಭೋಜನಕ್ಕೆ ಉಡುಪಿ ನಗರದ ಆಸುಪಾಸಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಅಂಗಡಿಗಳಲ್ಲಿ ಕೆಲಸ ಮಾಡುವ ನೌಕರರು ಸಿಬ್ಬಂದಿ ಬರುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿಯ ಭೋಜನವನ್ನು ಆರಂಭಿಸಲು ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಆದೇಶವನ್ನು ನೀಡಿದ್ದಾರೆ ಎಂದು ಮಠದ ಗೋವಿಂದರಾಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಟಾಕಿ ಅಂಗಡಿಯಲ್ಲಿ ಸ್ಫೋಟದಿಂದ ಮೂವರು ಸಾವು- ತಲಾ 2 ಲಕ್ಷ ಪರಿಹಾರ ಘೋಷಿಸಿದ ಜಮೀರ್
ನಮ್ಮ ಮಗುವಿಗೆ ಕೃಷ್ಣಮಠದಲ್ಲೇ ಅನ್ನ ಪ್ರಾಶನ ಮಾಡಿಸಬೇಕು ಎಂದು ನಾವು ಸಂಕಲ್ಪ ಮಾಡಿದ್ದೆವು. ಕೊರೊನಾ ಬಂದ ಕಾರಣ ಅದು ಸಾಧ್ಯ ಆಗಿರಲಿಲ್ಲ. ಸಾರ್ವಜನಿಕವಾಗಿ ಅನ್ನಸಂತರ್ಪಣೆ ಆರಂಭವಾದ ದಿನವೇ ನಾವು ಅನ್ನಪ್ರಾಶನ ಮಾಡಿಸಿರುವುದು ಮನಸ್ಸಿಗೆ ಬಹಳಷ್ಟು ಸಂತೋಷ ನೀಡಿದೆ. ಜಗದ್ಗುರು ಶ್ರೀ ಕೃಷ್ಣ ಪರಮಾತ್ಮನ ಸಂವಿಧಾನದಲ್ಲಿ ಅನ್ನಪ್ರಾಶನ ಮಾಡಿಸಿದ್ದೇವೆ ಎಂದು ಭಕ್ತರಾದ ರಾಘವೇಂದ್ರ ಮತ್ತು ಅನಿತಾ ಹೇಳಿದ್ದಾರೆ.