ಗದಗ: ರಥೋತ್ಸವದ (Chariot Festival) ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸಾವನ್ನಪ್ಪಿದ್ದು, ಓರ್ವನಿಗೆ ಗಾಯವಾದ ಘಟನೆ ಜಿಲ್ಲೆಯ ರೋಣ (Rona) ಪಟ್ಟಣದಲ್ಲಿ ನಡೆದಿದೆ.
ರೋಣದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಇಂದು ಮಹಾ ರಥೋತ್ಸವ ನಡೆಯಿತು. ಈ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೆ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ಮೃತ ಭಕ್ತರು ರೋಣ ಮೂಲದ ನಿವಾಸಿಗಳು ಎನ್ನಲಾಗಿದೆ. ಮಲ್ಲಪ್ಪ ಲಿಂಗನಗೌಡ (55) ಹಾಗೂ ಮತ್ತೋರ್ವ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವ ಮೃತನ ಹೆಸರು ತಿಳಿದು ಬಂದಿಲ್ಲ. ಮುಖದ ಮೇಲೆ ರಥದ ಗಾಲಿ ಹರಿದಿರುವುದರಿಂದ ಮುಖ ನಜ್ಜುಗುಜ್ಜಾಗಿ ವ್ಯಕ್ತಿಯ ಗುರುತು ಪತ್ತೆ ಸಿಗದಂತಾಗಿದೆ. ಇದನ್ನೂ ಓದಿ: ನಿಮ್ಮ ಸೇವೆಗೆ ದೇವರು ನನ್ನ ಕಳುಹಿಸಿದ್ದಾನೆ: ಮೋದಿ
ರಥ ಎಳೆಯುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾದ ಹಿನ್ನೆಲೆ ಘಟನೆ ನಡೆದಿದೆ. ರಥಕ್ಕೆ ಎಸೆಯುವ ಬಾಳೆ ಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿ ರಥದ ಗಾಲಿಗೆ ಸಿಲುಕಿದ್ದಾರೆ. ಓರ್ವನ ಮುಖ ಹಾಗೂ ಮತ್ತೋರ್ವನ ಮರ್ಮಾಂಗದ ಮೇಲೆ ರಥದ ಚಕ್ರ ಹರಿದು ಇಬ್ಬರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬರ ಪರಿಹಾರ ಹಣ ಬಿಡುಗಡೆ – ಬಳ್ಳಾರಿಯ 36,944 ರೈತರ ಖಾತೆಗೆ 41.40 ಕೋಟಿ ರೂ. ಜಮೆ
ಈ ವೀರಭದ್ರೇಶ್ವರನ ಜಾತ್ರೆಗೆ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತ ಸಾಗರವೇ ಸೇರುತ್ತದೆ. ಈ ದುರ್ಘಟನೆ ನಂತರ ಜನರನ್ನು ಚದುರಿಸಲು ಪೊಲೀಸರು ಕೆಲಕಾಲ ಹರಸಾಹಸ ಪಡಬೇಕಾಯಿತು. ಇನ್ನೋರ್ವನ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಈ ಕುರಿತು ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚುನಾವಣಾ ಅಕ್ರಮಕ್ಕೆ ಆಯೋಗ ಕೊಕ್ಕೆ – 8,889 ಕೋಟಿ ಮೌಲ್ಯದ ನಗದು, ಡ್ರಗ್ಸ್, ಮದ್ಯ ಜಪ್ತಿ!