ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ನೀರಿಗಾಗಿ ಜಿಲ್ಲೆಯಲ್ಲಿ ರೈತರು ಹಾಗೂ ರಾಜಕಾರಣಿಗಳ ನಡುವೆ ಕೈ ಕೈ ಮಿಲಾಯಿಸುವ ಹಂತದ ಜಗಳ ನಡೆದಿದೆ.
ಜಿಲ್ಲೆಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಗಲಾಟೆಯಾಗಿದ್ದು ರೈತರು ರೊಚ್ಚಿಗೆದ್ದಿದ್ದರು. ಟಿಎಲ್ಬಿಸಿ ಕೆಳಭಾಗಕ್ಕೆ ನೀರು ಬಾರದ ಹಿನ್ನೆಲೆ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಅವರು ರೈತರು ಹಾಗೂ ರಾಜಕೀಯ ಮುಖಂಡರ ಸಭೆ ಕರೆದಿದ್ದರು. ಕೆಳಭಾಗಕ್ಕೆ ನೀರು ಬಾರದ ಹಿನ್ನೆಲೆ ಗಣೆಕಲ್ ಸಮತೋಲನ ಜಲಾಶಯದಿಂದ ನೀರು ಹರಿಸುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಗಭದ್ರಾ ಜಲಾಶಯ ತುಂಬಿದ್ದು, ಜಲಾಶಯದಿಂದ ನೀರು ಬಿಟ್ಟು 43 ದಿನಗಳಾದರೂ ಕೆಳಭಾಗದ 104 ನೇ ಮೈಲ್ ಗೆ ನೀರು ತಲುಪಿಲ್ಲ. ಕುಡಿಯುವ ಉದ್ದೇಶಕ್ಕೆ ಸಂಗ್ರಹಿಸಿದ ನೀರನ್ನು ಬಿಡಲು ಮುಂದಾಗಿರುವುದಕ್ಕೆ ರೈತರು ವಿರೋಧಿಸಿದ್ದಾರೆ. ಈ ವಿಷಯವಾಗಿ ರಾಜಕಾರಣಿಗಳು ಹಾಗೂ ರೈತರ ನಡುವೆ ವಾಕ್ಸಮರ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.
ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ಈ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಒಮ್ಮತದ ನಿರ್ಣಯಗಳು ಬಾರದಿದ್ದರೂ ಮುಂದಿನ ಪರಿಣಾಮಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ಹೊಣೆ ಅಂತ ರೈತರು ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv