ತುಮಕೂರು: ತುಮಕೂರಿನಲ್ಲಿ ನಡೆದ ಮದುವೆಯೊಂದು ಕಳೆದ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗಿತ್ತು. ಗಂಡ ಮೋಸ ಮಾಡಿದ್ದಕ್ಕೆ ಇಪ್ಪತ್ತು ವರ್ಷದ ಹಿರಿಯನಾಗಿದ್ದ ಶಂಕರಣ್ಣನನ್ನು ಮದುವೆಯಾಗುವಂತೆ ಮೇಘನಾ ಕೇಳಿಕೊಂಡು ವಿವಾಹವಾಗಿದ್ದರು. ಆದರೀಗ ಶಂಕರಣ್ಣನವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೇಘನಾ ಅವರು ಶಂಕರಣ್ಣ ಅವರ ಕೈಹಿಡಿಯುವ ಮುನ್ನವೇ ವಿವಾಹವಾಗಿದ್ದರು. ಆದರೆ ಮದುವೆಯಾಗಿ 2 ವರ್ಷಗಳೇ ಕಳೆದರೂ ಗಂಡ ವಾಪಸ್ ಬರೆದೇ ಮೋಸ ಮಾಡಿದ್ದನು. ನಂತರ ಶಂಕರಣ್ಣ ಅವರ ಮೇಲೆ ಮನಸ್ಸು ಹೊಂದಿದ್ದ ಮೇಘನಾ ಸ್ವತಃ ತಾವಾಗಿಯೇ ಹೋಗಿ ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದ್ದರು. ಇದನ್ನೂ ಓದಿ: 25 ವರ್ಷದವಳನ್ನು ಮದ್ವೆಯಾಗಿ ವೈರಲ್ ಆಗಿದ್ದ ಶಂಕರಣ್ಣ ಆತ್ಮಹತ್ಯೆ
45 ವರ್ಷವಾದರೂ ಶಂಕರಣ್ಣ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಅಲ್ಲದೇ ಮೊದಲಿಗೆ ಶಂಕರಣ್ಣ ಅವರು ಮದುವೆಯಾಗಲು ಒಪ್ಪಿಕೊಂಡಿರಲಿಲ್ಲ. ಆದರೆ ನಂತರ ಮದುವೆಯಾಗಲು ಒಪ್ಪಿ ಇಬ್ಬರು ಇಷ್ಟಪಟ್ಟು 2021ರ ಅಕ್ಟೋಬರ್ನಲ್ಲಿ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದರು. ಇದನ್ನೂ ಓದಿ: 45 ವರ್ಷದ ವ್ಯಕ್ತಿಯ ಜೊತೆ 25ರ ಯುವತಿ ಮದುವೆ
ಕಳೆದ ಮೂರ್ನಾಲ್ಕು ದಿನಗಳಿಂದ ಅತ್ತೆ, ಸೊಸೆ ನಡುವೆ ಜಗಳ ನಡೆದಿತ್ತು. ಇದರಿಂದ ಬೇಸತ್ತು ಶಂಕರಣ್ಣ ಮನೆ ಬಿಟ್ಟು ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಇಂದು ಬೆಳ್ಳಂಬೆಳ್ಳಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಪತಿಯನ್ನು ಕಳೆದುಕೊಂಡು ಮರದ ಕೆಳಗೆ ಕೂತು ಪತ್ನಿ ಮೇಘನಾ ರೋಧಿಸುತ್ತಿದ್ದಾರೆ.
ಹಳ್ಳಿಯಲ್ಲಿರುವುದು ಬೇಡ ಬೆಂಗಳೂರಿಗೆ ಹೋಗೋಣ ಎಂದು ಮೇಘನಾ ಶಂಕರಣ್ಣ ಅವರಿಗೆ ಕಾಟ ಕೊಡುತ್ತಿದ್ದರಿಂದ ಈ ವಿಚಾರವಾಗಿ ಅತ್ತೆ, ಸೊಸೆ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇದರಿಂದ ಬೇಸತ್ತು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಶಂಕರಣ್ಣ ಅವರದ್ದು ಆತ್ಮಹತ್ಯೆಯೋ.. ಕೊಲೆಯೋ.. ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.