ಬೀದರ್ : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ನಾಚಿಕೆ ಆಗಬೇಕು ಎಂದು ಪ್ರವಾಸೋದ್ಯಮ ಸಚಿವ ಹೆಚ್ಕೆ ಪಾಟೀಲ್ (HK Patel) ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ (Karnataka Congress Government) ಲೂಟಿಗೆ ಇಳಿದಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಗೆ ಜವಾಬ್ದಾರಿ ಇರಬೇಕು. ಪ್ರಧಾನಿಯಾಗಿ ನೀವೇ ಹೀಗೆ ಮಾತನಾಡುತ್ತಿದ್ದೀರಿ. ನಾಚಿಗೆ ಆಗಲ್ವಾ? ಚುನಾವಣಾ ಬಾಂಡ್ ಅನ್ನು ಆರ್ಟಿಐ ಮಾಹಿತಿ ಹಕ್ಕಿನಲ್ಲೂ ಕೊಡದಂತೆ ಕಾನೂನು ಮಾಡಿದ್ದೀರಿ. ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟದ ಸಂಧಾನಕ್ಕೆ ಬಂದು ಸೂಟ್ಕೇಸ್ ತೆಗೆದುಕೊಂಡು ಹೋಗುತ್ತಾರೆ ಎಂಬ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹೆಚ್ಡಿಕೆಗೆ ಬರೀ ಸೂಟ್ಕೇಸ್ನದ್ದೆ ಚಿಂತೆ. ಜನರ ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಸೂಟ್ಕೇಸ್ ಬಗ್ಗೆ ಮಾತನಾಡುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ಬರ ಪ್ರವಾಸಕ್ಕೆ ಪ್ರತಿಕ್ರಿಯಿಸಿ, ಒಬ್ಬ ಕೇಂದ್ರ ಮಂತ್ರಿಯೂ ರಾಜ್ಯಕ್ಕೆ ಭೇಟಿ ಕೊಡಲಿಲ್ಲ. ಈಗ ಬರ ಅಧ್ಯಯನ ಮಾಡುತ್ತಿದ್ದಾರೆ. ಇಂತಹ ನಾಯಕರಿಗೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.
ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಘೋಷಣೆ ಮಾಡಿದ್ದೇವೆ. ನಮ್ಮ ಸಿಎಂ ಪ್ರಧಾನಿ ಭೇಟಿ ಮಾಡಲು ಹೋದಾಗ ಅವರು ಸಿಗಲಿಲ್ಲ. ಕರ್ನಾಟಕದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ದೂರಿದರು. ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಪ್ರತಿಮಾ ಕೊಲೆ- ತಪ್ಪೊಪ್ಪಿಕೊಂಡ ಕಿರಣ್
ದಲಿತ ಸಿಎಂ ಬಗ್ಗೆ ಕೇಳಲಾದ ಪ್ರಶ್ನೆಗೆ, ಸಿಎಂ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ. ಖಾಲಿಯಾದಾಗ ಮಾತನಾಡುವ ಎಂದು ಹೇಳಿದರು.