ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಟಾಯ್ಲೆಟ್ ವಿಚಾರಕ್ಕೆ ಅಕ್ಕ-ಪಕ್ಕದ ಮನೆಯವರು ತಲ್ವಾರ್ ಹಿಡಿದು ಕಿತ್ತಾಡಿಕೊಂಡ ಘಟನೆ ನಗರದ ಸೆಟ್ಲ್ಮೆಂಟ್ ಬಡಾವಣೆಯಲ್ಲಿ ನಡೆದಿದೆ.
ನಗರದ ಸೆಟ್ಲ್ಮೆಂಟ್ ಬಡಾವಣೆಯಲ್ಲಿ ವಾಸವಿದ್ದ ಭಾರತಿ ಸುರೇಶ್ ಹಾಗೂ ರೋಹಿತ್ ಮಾರಣಾಂತಿಕ ಹಲ್ಲೆಗೆ ಒಳಗಾದವರು. ಕೇವಲ ಟಾಯ್ಲೆಟ್ ವಿಚಾರಕ್ಕೆ ನೆರೆಮನೆಯವರು ಜೊತೆ ಜಗಳ ತಾರಕಕ್ಕೇರಿ ನೆರೆಮನೆಯವರಾದ ಮಾರುತಿ ಭಜಂತ್ರಿ ಹಾಗೂ ಮಣಿಕಂಠ ಭಜಂತ್ರಿ ತಲ್ವಾರ್ ಹಿಡಿದು ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದಾಗಿ ಇಬ್ಬರ ತಲೆಗೆ ಗಂಭೀರ ಗಾಯವಾಗಿ, ರಕ್ತಸ್ರಾವವಾಗಿದೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ.
ಏನಿದು ಘಟನೆ?
ನೆರೆಮನೆ ಮೂರು ಮನೆಗಳಿಗೆ ಸೇರಿ ಒಂದೇ ಒಂದು ಟಾಯ್ಲೆಟ್ ಇತ್ತು. ಈ ಟಾಯ್ಲೆಟ್ಗೆ ಭಾರತಿ ಸುರೇಶ್ ಕುಟುಂಬದವರು ಬೀಗ ಹಾಕಿದ್ದರು. ಇದನ್ನು ಪ್ರಶ್ನಿಸಿದ ಮಾರುತಿ ಭಜಂತ್ರಿ ಹಾಗೂ ಮಣಿಕಂಠ ಭಜಂತ್ರಿ ಇಬ್ಬರು, ಇನ್ನೊಂದು ಕುಟುಂಬದ ಮೇಲೆ ಜಗಳಕ್ಕೆ ಬಿದ್ದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಮಾರುತಿ ಹಾಗೂ ಮಣಿಕಂಠ ತಲ್ವಾರ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆಯಿಂದ ಭಾರತಿ ಸುರೇಶ್ ಹಾಗೂ ರೋಹಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಹಲ್ಲೆ ನಡೆಸಿದ್ದ ಮಾರುತಿ ಹಾಗೂ ಮಣಿಕಂಠ ಭಜಂತ್ರಿ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv