ನವದೆಹಲಿ: ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ನಡೆಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ.
ಕಾಂಗ್ರೆಸ್ ಒಂದೊಮ್ಮೆ ಕೇವಲ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದರೆ, ಸ್ವಾತಂತ್ರ್ಯ ನಂತರ ಅತೀ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದಂತಾಗುತ್ತದೆ. ಎರಡನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆ ಮಾಡದಂತೆ ತಡೆಯುವ ಮೂಲಕ ಸಮಾನ ಮನಸ್ಸಿನ ಇತರೇ ಪಕ್ಷಗಳೊಂದಿಗೆ `ಮಹಾಮೈತ್ರಿ’ ಮಾಡಲು ಕಾಂಗ್ರೆಸ್ ಈ ತಂತ್ರ ಮಾಡಿದೆ ಎನ್ನಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ರೂಪುಗೊಳ್ಳಲಿರುವ ಮಹಾಮೈತ್ರಿಗೆ ಕಾಂಗ್ರೆಸ್ ಹಿರಿಯ ನಾಯಕ ಎಕೆ ಅ್ಯಂಟನಿ ನೇತೃತ್ವದ ಹಿರಿಯರ ಸಮಿತಿ ದೇಶಾದ್ಯಂತ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳಿಂದ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲು ಮುಂದಾಗಿದೆ. ಕಾಂಗ್ರೆಸ್ ಕಮಿಟಿ ನೀಡುವ ಸಲಹೆ ಮೇರೆಗೆ ರಾಹುಲ್ ಗಾಂಧಿ ಅವರು ಮೈತ್ರಿ ಮಾಡಿಕೊಳ್ಳುವ ಅಂತಿಮ ತೀರ್ಮಾನ ಮಾಡಲಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರ ಸಮಿತಿ ಮತ್ತೊಂದು ಹಂತದಲ್ಲಿ ಕ್ಷೇತ್ರವಾರು ಸೂಕ್ತ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಸಿದ್ಧತೆ ನಡೆಸುತ್ತಿದ್ದು, ಉತ್ತಮ ಹಿನ್ನೆಲೆ ಹೊಂದಿರುವ, ಗೆಲ್ಲುವ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುತ್ತಿದ್ದು, ಇದು ಮಹಾಮೈತ್ರಿಗೆ ಸೂಚನೆ ಎನ್ನಲಾಗಿದೆ. ಆದರೆ 2014 ರ ಚುನಾವಣೆಯಲ್ಲಿ ಮೋದಿ ಅಲೆ ನಡುವೆಯೂ ಗೆದ್ದು ಬೀಗಿದ್ದ 44 ಸ್ಥಾನಗಳನ್ನು ಮಾತ್ರ ಬಿಟ್ಟುಕೊಡದಿರಲು ನಿರ್ಧರಿಸಿದೆ ಎನ್ನಲಾಗಿದೆ.
ಪ್ರಮುಖವಾಗಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಈ ಮೈತ್ರಿ ಪರಿಣಾಮಕಾರಿಯಾಗಿ ರೂಪುಗೊಳ್ಳಲು ಸಿದ್ಧತೆ ನಡೆಸಿದೆ. ಈ ಮೈತ್ರಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹತ್ವದ ಸ್ಥಾನ ಪಡೆಯಲು ಚಿಂತನೆ ನಡೆಸಿದೆ. ಆದರೆ ದಕ್ಷಿಣ ರಾಜ್ಯಗಳಾದ ತೆಲಂಗಾಣದಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ನೀಡಲು ಮುಂದಾಗಿದೆ. ಇದು ರಾಹುಲ್ ಗಾಂಧಿ ಅವರ ಮಹಾಮೈತ್ರಿಗೆ ಸವಾಲಾಗಿದೆ.
ಮಹಾಮೈತ್ರಿಯಲ್ಲಿ ಪ್ರಧಾನಿ ಪಟ್ಟಕ್ಕಾಗಿ ರಾಹುಲ್ ಗಾಂಧಿ ಈ ಹಿಂದೆ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸಹ ಮೈತ್ರಿ ಮುಂದಾಗಿರುವ ಹಲವು ಪಕ್ಷಗಳಲ್ಲಿ ಈ ಕುರಿತು ಅಸಮಾಧಾನ ಇರುವ ಸಾಧ್ಯತೆಗಳಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಂತಹ ನಾಯಕರು ಈ ಕುರಿತು ಒಮ್ಮತ ವ್ಯಕ್ತಪಡಿಸಬೇಕಾದ ಅನಿವಾರ್ಯತೆ ಇದೆ.