ಕೋಲ್ಕತ್ತಾ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ನನ್ನು (Sheikh Shahjahan) ತೃಣಮೂಲ ಕಾಂಗ್ರೆಸ್ (Trinamool Congress) ಅಮಾನತುಗೊಳಿಸಿದೆ. ಪಶ್ಚಿಮ ಬಂಗಾಳ ಪೊಲೀಸರು ಆತನನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಪಕ್ಷವು ಷಹಜಹಾನ್ನನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಟಿಎಂಸಿ ನಾಯಕ ಡೆರೆಕ್ ಓಬ್ರೇನ್, ಪಶ್ಚಿಮ ಬಂಗಾಳದ (West Bengal) ಸಚಿವ ಬ್ರತ್ಯಾ ಬಸು ಅವರು ಈ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ, ಬಿಜೆಪಿ ಸಂದೇಶ್ಖಾಲಿ ವಿಷಯದಲ್ಲಿ ಪ್ರತಿಭಟಿಸಿದ್ದು, ನಮ್ಮ ಸರ್ಕಾರ ಕಾನೂನನ್ನು ಎತ್ತಿಹಿಡಿಯಲು ಬದ್ಧವಾಗಿದೆ. ಇನ್ನೂ ಬಿಜೆಪಿಯ ಕಳಂಕಿತ ನಾಯಕ, ಭಾರತದ ಮಾಜಿ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ ಎಂದು ಟಿಎಂಸಿ ನಾಯಕರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ: 55 ದಿನಗಳಿಂದ ತಲೆಮರೆಸಿಕೊಂಡಿದ್ದ ಟಿಎಂಸಿ ನಾಯಕ ಅರೆಸ್ಟ್
ಶೇಖ್ ಷಹಜಹಾನ್ ಪ್ರಕರಣದಲ್ಲಿ ಏನೇನಾಯ್ತು?
ಜನವರಿ 5ರಂದು ಇಡಿ ತಂಡ ಷಹಜಹಾನ್ ಮನೆ ಮೇಲೆ ದಾಳಿ ಮಾಡಲು ತೆರಳಿದ್ದಾಗ, ಆತನ ಬೆಂಬಲಿಗರಿಂದ ಅಧಿಕಾರಿಗಳ ಮೇಲೆ ದಾಳಿಯಾಗಿತ್ತು. ಬಳಿಕ ಶೇಖ್ ಷಹಜಹಾನ್ ಸಂದೇಶ್ಖಾಲಿಯಿಂದ ತಪ್ಪಿಸಿಕೊಂಡಿದ್ದ. ಜನವರಿ 8ರಂದು ಶೇಖ್ ಷಹಜಹಾನ್ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾದವು. ಸಂದೇಶ್ಖಾಲಿಯಲ್ಲಿ ಶೇಖ್ ಷಹಜಹಾನ್ ಮತ್ತು ಆತನ ಬೆಂಬಲಿಗರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಆತನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಫೆಬ್ರವರಿ 18 ರಂದು ಸಂದೇಶ್ಖಾಲಿಯಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ಫೆಬ್ರವರಿ 18 ರಂದು ಶೇಖ್ ಷಹಜಹಾನ್ ಅವರ ಸಹಾಯಕ ಶಿಬು ಹಜ್ರಾನನ್ನು ಬಂಧಿಸಲಾಯಿತು.
ಫೆಬ್ರವರಿ 25ರಂದು ಶೇಖ್ ಷಹಜಹಾನ್ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ತೃಣಮೂಲ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ಫೆಬ್ರವರಿ 26ರಂದು ಯಾವುದೇ ತಡೆಯಾಜ್ಞೆ ಇಲ್ಲ ಮತ್ತು ಷಹಜಹಾನ್ನನ್ನು ಬಂಧಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಇಂದು (ಫೆ.29) ಶೇಖ್ ಷಹಜಹಾನ್ನನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಆತನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಿಐಡಿ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಇದನ್ನೂ ಓದಿ: 1993ರ ಸರಣಿ ಬಾಂಬ್ಬ್ಲಾಸ್ಟ್ ಪ್ರಕರಣದ ಮಾಸ್ಟರ್ ಮೈಂಡ್ `ಡಾ. ಬಾಂಬ್’ ಖುಲಾಸೆ