ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ನುಸ್ರತ್ ಅವರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಅಲ್ಲದೆ ಅವರಿಗೆ ಉಸಿರಾಡಲು ಕಷ್ಟವಾಗುತ್ತಿದ್ದರಿಂದ ಅವರನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಯಿತು. ನುಸ್ರತ್ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕುಟುಂಬಸ್ಥರ ಪ್ರಕಾರ, ನುಸ್ರತ್ ಅವರನ್ನು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಈ ಮೊದಲು ನುಸ್ರತ್ ಅಸ್ತಮಾದಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ಉಸಿರಾಡಲು ಕಷ್ಟವಾಯಿತು ಎಂದು ಕುಟುಂಬಸ್ಥರು ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾದ ಕಾರಣ ನುಸ್ರತ್ ಅವರು ಸಂಸತ್ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ.
ನುಸ್ರತ್ ಜಹಾನ್ ಇದೇ ವರ್ಷ ಜೂನ್ 19ರಂದು ಉದ್ಯಮಿ ನಿಖಿಲ್ ಜೈನ್ ಜೊತೆ ಟರ್ಕಿಯ ಬೋದ್ರಮ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಬಗ್ಗೆ ನುಸ್ರತ್ ತಮ್ಮ ಟ್ವಿಟ್ಟರಿನಲ್ಲಿ ಮದುವೆ ಫೋಟೋ ಹಾಕಿ ಅಧಿಕೃತವಾಗಿ ಎಲ್ಲರಿಗೂ ತಿಳಿಸಿದ್ದರು. ಜುಲೈ 4ರಂದು ನುಸ್ರತ್ ಹಾಗೂ ನಿಖಿಲ್ ಜೈನ್ ಕೋಲ್ಕತ್ತಾದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಬೆಂಗಾಲಿ ಕಲಾವಿದರು ಹಾಗೂ ರಾಜಕೀಯ ನಾಯಕರು ಆಗಮಿಸಿದ್ದರು.