-ಕೊರೊನಾ ಅಷ್ಟೇ ಅಲ್ಲ ಪ್ಲೇಗ್ ಕೂಡ ಚೀನಾದಿಂದ್ಲೆ ಹರಡಿತ್ತು
ಕೋವಿಡ್-19 (Corona) ಇಡೀ ಜಗತ್ತನ್ನೇ ಹಿಂಡಿಹಿಪ್ಪೆ ಮಾಡಿದ ಸಾಂಕ್ರಾಮಿಕ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಬಲಿಯಾದರು. ಸೋಂಕು ತಗುಲುವ ಭೀತಿಯಿಂದ ಜನರು ಮನೆಯಲ್ಲೇ ಬಂಧಿಯಾಗಿ ಜೈಲುವಾಸ ಅನುಭವಿಸಿದರು. ಇಡೀ ಜಗತ್ತು ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟ ಎದುರಿಸಿತು. ಇಷ್ಟೆಲ್ಲ ಭೀಕರತೆಯ ನಡುವೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು 2020ರ ಮಾರ್ಚ್ ತಿಂಗಳಲ್ಲಿ WHO ಘೋಷಿಸಿತು. ಇಂತಹ ಅನೇಕ ಸಾಂಕ್ರಾಮಿಕಗಳು ಮನುಕುಲವನ್ನು ಕಾಡಿ ಹೋಗಿವೆ. ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿ ಚೀನಾ ಕುಖ್ಯಾತಿ ಪಡೆಯಿತು. ಕೋವಿಡ್ ಅಷ್ಟೇ ಅಲ್ಲ, ಮತ್ತೊಂದು ರಾಕ್ಷಸ ಸಾಂಕ್ರಾಮಿಕ ಪ್ಲೇಗ್ ಹುಟ್ಟಿಗೂ ಚೀನಾ ದೇಶವೇ ಕಾರಣ.
ಪ್ಲೇಗ್ (Plague) ಸಾಂಕ್ರಾಮಿಕ ಇತರೆ ದೇಶಗಳಿಗಿಂತ ಭಾರತವನ್ನೇ (India) ಕಾಡಿದ್ದು ಹೆಚ್ಚು. ಅದಕ್ಕಾಗಿ ಇದನ್ನು ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ಎಂದೇ ಕರೆಯಲಾಗುತ್ತೆ. ಏನಿದು ಪ್ಲೇಗ್? ಇದು ಹುಟ್ಟಿದ್ದೆಲ್ಲಿ? ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಪ್ಲೇಗ್ನಿಂದ ದೇಶದಲ್ಲಾದ ದುರಂತ ಕಥನಗಳ ಬಗ್ಗೆ ತಿಳಿಯೋಣ.
ಪ್ಲೇಗ್ ಹುಟ್ಟಿದ್ದೆಲ್ಲಿ?: 1855ರಲ್ಲಿ ಚೀನಾದ (China) ಯುನಾನ್ನಲ್ಲಿ ಕಾಣಿಸಿಕೊಂಡ ಪ್ಲೇಗ್, ಸಾಂಕ್ರಾಮಿಕ ರೋಗವಾಗಿ 1959ರಲ್ಲಿ ವಿಶ್ವದಾದ್ಯಂತ ಹಬ್ಬಿತ್ತು. ಅಷ್ಟೇ ಅಲ್ಲದೇ ವಿಶ್ವಾದ್ಯಂತ ವರ್ಷಕ್ಕೆ 200ಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿತ್ತು. ಈ ಅವಧಿಯಲ್ಲಿ ಪ್ರಪಂಚದಾದ್ಯಂತ 12-25 ಮಿಲಿಯನ್ ಜನರು ಸಾವನ್ನಪ್ಪಿದ್ದರು. ಸ್ಯಾನ್ ಫ್ರಾನ್ಸಿಸ್ಕೋ, ಗ್ಲಾಸ್ಗೋ ಮತ್ತು ಪೋರ್ಟೊದಂತೆಯೇ ಹಾಂಗ್ ಕಾಂಗ್ ಮತ್ತು ಮುಂಬೈಯಂತಹ ನಗರಗಳ ಮೇಲೂ ಪ್ಲೇಗ್ ದುಷ್ಪರಿಣಾಮ ಬೀರಿತ್ತು.
ಏನಿದು ಪ್ಲೇಗ್? ಬುಬೊನಿಕ್ ಪ್ಲೇಗ್ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ಪ್ಲೇಗ್ ರೋಗ ಕಾಣಿಸಿಕೊಂಡಿದೆ. ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹೆಚ್ಚು ಹರಡುತ್ತದೆ. ಪ್ಲೇಗ್ ಬಂದವರಿಗೆ ಮೊದಲಿಗೆ ಜ್ವರ, ಶೀತ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕು ಹೆಚ್ಚಾದಂತೆ ಆಯಾಸ, ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಅದಾದ ನಂತರ ಒಂದು ವಾರದೊಳಗೆ ಬಹು ಅಂಗಾಗ ವೈಫಲ್ಯದಿಂದಾಗಿ ಸೋಂಕಿತ ವ್ಯಕ್ತಿ ಮೃತಪಡಬಹುದು.
ಜನವರಿ 1897ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಈ ರೋಗವು ಇಲಿಗಳಲ್ಲಿ ಕಂಡುಬಂದಿದೆ ಎಂದು ಪತ್ತೆಹಚ್ಚಿದರು. ಅದಾದ ಬಳಿಕ ಇದೊಂದು ಸಾಂಕ್ರಾಮಿಕ ರೋಗವೆಂದು ಎಚ್ಚರಿಕೆಯನ್ನು ನೀಡಿದರು.
ಭಾರತಕ್ಕೆ ಹೇಗೆ ಬಂತು ಪ್ಲೇಗ್?: ಪ್ಲೇಗ್ ಚೀನಾದಲ್ಲಿ ಪ್ರಾರಂಭವಾಯಿತಾದರೂ ಸಮುದ್ರದ ಮೂಲಕ ಭಾರತಕ್ಕೆ ಬಂತು. ಆ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಂಗ್ಕಾಂಗ್ನಿಂದ ಬರುವ ಹಡಗುಗಳಿಗೆ ಏಕಾಏಕಿ ಕ್ವಾರಂಟೈನ್ ವಿಧಿಸಿದ್ದರು. ಆದರೆ ಕ್ವಾರಂಟೈನ್ ನಿಯಮವನ್ನು ಸಡಿಲಗೊಳಿಸುತ್ತಿದ್ದಂತೆ ಭಾರತದಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಅದರಲ್ಲೂ ಕೋಲ್ಕತ್ತಾ, ಮುಂಬೈ, ಕರಾಚಿ ಹಾಗೂ ಪುಣೆಯಲ್ಲಿ ಹೆಚ್ಚಾಗಿ ಕೇಸ್ಗಳು ದಾಖಲಾದವು. ತಜ್ಞರ ಪ್ರಕಾರ 19ನೇ ಶತಮಾನದ ಆರಂಭದಲ್ಲಿಯೇ ದೇಶದ ವಿವಿಧ ಭಾಗಗಳಲ್ಲಿ ಪ್ಲೇಗ್ ಏಕಾಏಕಿ ಕಾಣಿಸಿಕೊಂಡಿತು. ಆದರೆ ಆ ಸಮಯದಲ್ಲಿ ಕಾಲರಾ ನಿಯಂತ್ರಣದ ಮೇಲೆ ಹೆಚ್ಚು ಕಾಳಜಿಯನ್ನು ವಹಿಸಲಾಗಿತ್ತು.
ಪ್ಲೇಗ್ನಿಂದಾಗೋ ತೊಂದರೆ ಏನು?: ಪ್ಲೇಗ್ ಭೀತಿಯು ಜಾಗತಿಕವಾಗಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಮುಂಬೈನಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಂಡಿತು. ಇದರಿಂದಾಗಿ ಮುಂಬೈ ಅನ್ನು ಪ್ಲೇಗ್ ನಗರ ಎಂದು ಕರೆಯಲಾಯಿತು. 1897ರಲ್ಲಿ ಮುಂಬೈನಲ್ಲಿ ಸುಮಾರು 8,50,000 ಜನಸಂಖ್ಯೆಯಿತ್ತು. ಆದರೆ ಪ್ಲೇಗ್ನಿಂದಾಗಿ ಸುಮಾರು 3,80,000 ಜನರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋದರು. ಇದರಿಂದಾಗಿ ಗ್ರಾಮದ ಮೂಲೆ ಮೂಲೆಗಳಲ್ಲೂ ಪ್ಲೇಗ್ ಹರಡಿತು.
ಅಷ್ಟೇ ಅಲ್ಲದೇ ಧಾನ್ಯದ ವ್ಯಾಪಾರದಿಂದಲೂ ಪ್ಲೇಗ್ ಹರಡಿತು. ಧಾನ್ಯದ ಅಂಗಡಿಗಳಿಗೆ ಇಲಿಗಳು ಮುತ್ತಿಗೆ ಹಾಕುತ್ತಿದ್ದವು. ಇದರಿಂದಾಗಿ 1897ರ ಅಂತ್ಯದ ವೇಳೆಗೆ ಪ್ಲೇಗ್ ಪಂಜಾಬ್ನವರೆಗೂ ಹಬ್ಬಿತ್ತು. ಅಷ್ಟೇ ಅಲ್ಲದೇ ಪಂಜಾಬ್ನಲ್ಲಿ ಹೆಚ್ಚಿನ ಸಾವು- ನೋವುಗಳು ಸಂಭವಿಸಿದವು.
ಹೇಗಿತ್ತು ಬ್ರಿಟಿಷ್ ಅಧಿಕಾರಿಗಳ ಸ್ಪಂದನೆ: ಪ್ಲೇಗ್ ಮುಂಬೈನಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಸ್ವಚ್ಛತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಪ್ರಾರಂಭಿಸಿದರು. ನಂತರ ಸ್ಥಳೀಯರಿಗೆ ಬಲವಂತವಾಗಿ ತಪಾಸಣೆ ಮಾಡಿಸುವುದು, ಪ್ಲೇಗ್ ಕಂಡುಬಂದಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಈ ವಿಚಾರವಾಗಿ ಕೆಲವೊಮ್ಮೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಘರ್ಷಣೆಯೂ ನಡೆಯಿತು. ಅಲ್ಲದೇ ಅಧಿಕಾರಿಗಳು ಎಲ್ಲಾ ರೈಲು ನಿಲ್ದಾಣ ಹಾಗೂ ಬಂದರುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಕಡೆಗಳಲ್ಲಿ ಗಲಭೆಗಳು ಉಂಟಾಯಿತು.
ಆದರೆ 1900ರ ಹೊತ್ತಿಗೆ ಪರಿಸ್ಥಿತಿ ಬದಲಾಗತೊಡಗಿತು. ಈ ಸಂದರ್ಭದಲ್ಲಿ ಪ್ಲೇಗ್ ವಿರುದ್ಧ ಹೋರಾಡಲು ಅನೇಕ ಔಷಧಿ, ಚುಚ್ಚುಮದ್ದುಗಳನ್ನು ಕಂಡುಹಿಡಿಯಲಾಯಿತು. ಆದರೆ ಈ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಲಸಿಕೆ ಬಗ್ಗೆ ಅನೇಕ ವದಂತಿಗಳು ಹರಡಿತ್ತು. ಲಸಿಕೆಯಿಂದಾಗಿ ಜನರ ಲೈಂಗಿಕ ಶಕ್ತಿಗಳು ನಾಶವಾಗುತ್ತದೆ ಎಂಬ ವದಂತಿ ಹೆಚ್ಚಾಗಿ ಹರಡಿತು. ಇದನ್ನೂ ಓದಿ: PublicTV Explainer: ಇರಾನ್ನಲ್ಲಿ ಹಿಜಬ್ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?
ಪ್ಲೇಗ್ ಕ್ಷೀಣಿಸಿದ್ದು ಹೇಗೆ?: ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲಿ ಅದು ಸಂಪೂರ್ಣವಾಗಿ ಕಣ್ಮರೆಯಾಯಿತು. 1990ರ ನಂತರ ರಷ್ಯನ್ ಫ್ರೆಂಚ್ ಬ್ಯಾಕ್ಟೀರಿಯಾಲಜಿಸ್ಟ್ ವಾಲ್ಡೆಮರ್ ಹಾಫ್ಕಿನ್ ಅಭಿವೃದ್ಧಿ ಪಡಿಸಿದ ಲಸಿಕೆಯೂ ಹೆಚ್ಚಾಗಿ ಪ್ರಚಲಿತಕ್ಕೆ ಬಂತು. ಮರಣ ಪ್ರಮಾಣವನ್ನು ಸುಮಾರು 80 ಪ್ರತಿಶತದಷ್ಟು ಕಡಿಮೆ ಮಾಡಿತು. ಇಲಿಗಳ ಹತ್ಯೆ ಮಾಡಿದಾಗ ಈ ರೊಗವು ಮತ್ತಷ್ಟು ಕಡಿಮೆಯಾಯಿತು.
ಪ್ಲೇಗ್ ಆಯ್ತು, ಕೊರೊನಾ ಆಯ್ತು. ಈ ಕರಾಳತೆಯಿಂದ ಜನರು ಹೊರಬಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಹೆಚ್3ಎನ್2 ವೈರಸ್ ಭೀತಿ ಆವರಿಸಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾರ್ಗಸೂಚಿಯನ್ನು ಹೊರಡಿಸಿದ್ದು, ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!